ಯೋಗಿ ಆದಿತ್ಯನಾಥ್'ಗೆ ಹಿನ್ನಡೆ: ಆಹಾರದ ಆಯ್ಕೆ ಬದುಕಿನ ಹಕ್ಕು ಎಂದ ಹೈಕೋರ್ಟ್

ಪ್ರಜೆಗಳು ತಮಗೆ ಬೇಕಾದ ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವುತು ಮತ್ತು ಆಹಾರ ಪದಾರ್ಥಗಳನ್ನು ವ್ಯಾಪಾರ ಮಾಡುವುದು ಅವರವರ ಬದುಕಿನ ಹಕ್ಕಾಗಿದ್ದು, ಕಸಾಯಿಖಾನೆ ಮುಚ್ಚಿದ್ದರಿಂದಾಗಿ ರಾಜ್ಯದಲ್ಲಿ ಆಹಾರ ಕೊರತೆಯುಂಟಾಗಿದೆ...
ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಲಖನೌ: ಪ್ರಜೆಗಳು ತಮಗೆ ಬೇಕಾದ ಆಹಾರ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವುತು ಮತ್ತು ಆಹಾರ ಪದಾರ್ಥಗಳನ್ನು ವ್ಯಾಪಾರ ಮಾಡುವುದು ಅವರವರ ಬದುಕಿನ ಹಕ್ಕಾಗಿದ್ದು, ಕಸಾಯಿಖಾನೆ ಮುಚ್ಚಿದ್ದರಿಂದಾಗಿ ರಾಜ್ಯದಲ್ಲಿ ಆಹಾರ ಕೊರತೆಯುಂಟಾಗಿದೆ. ಈ ಬಗ್ಗೆ ಸ್ಪಷ್ಟ ಉತ್ತರ ನೀಡಿ ಎಂದು ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಬುಧವಾರ ಪ್ರಶ್ನೆ ಹಾಕಿದೆ. 
ಮಾಂಸದ ಅಂಗಡಿಯ ಪರವಾನಗಿಯನ್ನು ನವೀಕರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕೋರಿ ವ್ಯಾಪಾರಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿರುವ ನ್ಯಾಯಪೀಠ, ಉತ್ತರಪ್ರದೇಶದಲ್ಲಿ ಹಲವು ಆಹಾರ ಪದ್ಧತಿಗಳಿವೆ. ಇದು ರಾಜಾಯದ ಜಾತ್ಯಾತೀತ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಅಕ್ರಮ ಕಸಾಯಿಖಾನೆ ಮತ್ತು ಮಾಂಸದ ಅಗಂಡಿಗಳನ್ನು ಮುಚ್ಚುವ ಸರ್ಕಾರದ ಕ್ರಮವು ಜನರ ಜೀವನಾಧಾರ ವೃತ್ತಿ ಅಥವಾ ಆಹಾರವನ್ನು ಕಸಿದುಕೊಳ್ಳುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ನಿಷೇಧಿಸುವ ಸಂದರ್ಭದಲ್ಲಿಯೇ ಕಾನೂನು ಸಮ್ಮತವಾದ ಚಟುವಟಿಕೆ ನಡೆಸಲು ಸರ್ಕಾರ ಆಸ್ಪದ ಮಾಡಿಕೊಡಬೇಕು. 
ಆಹಾರ, ಆಹಾರ ಪದ್ಧತಿ, ಆಹಾರದ ಮಾರಾಟಗಳು ಬದುಕುವ ಹಕ್ಕಿಗೆ ಸಂಬಂಧಿಸಿದ್ದಾಗಿದ್ದು, ಆರೋಗ್ಯಕ್ಕೆ ಪೂರವಾಗಿರುವ ಆಹಾರನವನ್ನು ತಪ್ಪು ಆಯ್ಕೆ ಎಂದು ಪರಿಗಣಿಸಬಾರದು. ಆರೋಗ್ಯ ಪೂರಕವಾದ ಆಹಾರವನ್ನು ಪೂರೈಕೆ ಮಾಡುವುದು ಸರ್ಕಾರದ ಹಕ್ಕು, ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ರೀತಿಯ ಯೋಜನೆಯನ್ನು 10 ದಿನದ ಒಳಗಾಗಿ ರೂಪಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. 
ನ್ಯಾಯಾಲಯದ ಆದೇಶದಿಂದಾಗಿ ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಹಿನ್ನಡೆಯುಂಟಾದಂತಾಗಿದೆ.
ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿದ ಬಳಿಕ ಸಾಕಷ್ಟು ನಾಟಕೀಯ ಬೆಳವಣಿಗೆಗಳ ಬಳಿಕ ಯೋಗಿ ಆದಿತ್ಯನಾಥ್ ಅವರನ್ನು ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಚುನಾವಣೆ ವೇಳೆ ಜನರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಮುಂದಾಗಿದ್ದರು. 
ಇದರಂತೆ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದರು. ಇದರಿಂದಾಗಿ ಉತ್ತರಪ್ರದೇಶದಲ್ಲಿ ಸಾಕಷ್ಟು ಜನರ ಆಹಾರ ಪದ್ಧತಿಯ ಮೇಲೆ ಗಂಭೀರವಾದ ಪರಿಣಾಮಗಳು ಬೀರಿದ್ದವು. ಇದಕ್ಕೆ ಮಾಂಸದ ಅಂಗಡಿಯ ಮಾಲೀಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಮೀರುತ್'ನಲ್ಲಿ ಖಾಸಗಿ ಮಾಧ್ಯಮವೊಂದು ಕುಟುಕು ಕಾರ್ಯಾಚರಣೆಯನ್ನು ನಡೆಸಿತ್ತು. ಈ ವೇಳೆ ಅಕ್ರಮವಾಗಿ ಗೋಮಾಂಸವನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿತ್ತು. ಸರ್ಕಾರ ಕಸಾಯಿಖಾನೆಗಳನ್ನು ಬಂದ್ ಮಾಡಿಸುವ ಮೂಲಕ, ಗ್ರಾಹಕರು ಕಾಳ ಮಾರುಕಟ್ಟೆಗೆ ಹೋಗುವಂತೆ ಮಾಡುತ್ತಿದೆ ಎಂದು ಕೆಲ ಹೋರಾಟಗಾರರು ಆರೋಪಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com