ಚೆನ್ನೈ: ಅರ್ ಕೆ ನಗರ ಉಪ ಚುನಾವಣೆಯನ್ನು ತೀರಾ ಪ್ರತಿಷ್ಠೆಯ ಕಣವಾಗಿ ಪರಿಗಣಿಸಿರುವ ತಮಿಳುನಾಡು ರಾಜಕೀಯ ಪಕ್ಷಗಳು ಶತಾಯಗತಾಯ ಆ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂಬ ಕಾರಣಕ್ಕೆ ಮತದಾರರಿಗೆ ಹಣ ಹೊಳೆಯನ್ನೇ ಹರಿಸುತ್ತಿರುವ ಸಂಗತಿ ಆದಾಯ ತೆರಿಗೆ ಆಧಿಕಾರಿಗಳ ದಾಳಿಯಿಂದಾಗಿ ತಿಳಿದುಬಂದಿದೆ.
ಮೂಲಗಳ ಪ್ರಕಾರ ಇತ್ತೀಚೆಗೆ ನಟ ಶರತ್ ಕುಮಾರ್ ಮತ್ತು ಸಚಿವ ವಿಜಯ ಭಾಸ್ಕರ್ ಅವರ ನಿವಾಸ ಸೇರಿದಂತೆ ಚೆನ್ನೈನ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಅಧಿಕಾರಿಗಳು ಭಾರಿ ಪ್ರಮಾಣದ ನಗದನ್ನು ವಶಪಡಿಸಿಕೊಂಡಿದ್ದರು. ಈ ಹಣ ಮತದಾರರಿಗೆ ಹಂಚಿಕೆ ಮಾಡಲು ಶೇಖರಿಸಿಡಲಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದಾಯ ತೆರಿಗೆ ದಾಳಿ ವೇಳೆ ಮತದಾರರಿಗೆ 90 ಕೋಟಿ ರು. ಹಣ ಹಂಚಲು ನಡೆಸಿದ್ದ ಯೋಜನೆ ದಾಖಲೆಗಳಲ್ಲಿ ಬಹಿರಂಗವಾಗಿತ್ತು.
ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿ ಸ್ವಾಮಿ ಸೇರಿದಂತೆ ಸಂಪುಟದ 7 ಮಂತ್ರಿಗಳು ಈ ಹೊಣೆಗಾರಿಕೆ ಹೊತ್ತುಕೊಂಡಿರುವ ಸ್ಫೋಟಕ ಮಾಹಿತಿ ಲಭಿಸಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ಆರ್.ಕೆ. ನಗರ ಕ್ಷೇತ್ರದ 2.63 ಲಕ್ಷ ಮತದಾರರ ಪೈಕಿ 2.24 ಲಕ್ಷ ಮತದಾರರ (ಶೇ.85)ನ್ನು ಗುರುತಿಸಿದ್ದ ಆಡಳಿತಾರೂಢ (ಶಶಿಕಲಾ) ಬಣ ಹಣ ಅವರಿಗೆ ಹಣ ಹಂಚಿಕೆ ಮಾಡಿತ್ತು. ಪ್ರತೀ ಮತಕ್ಕೆ ಬರೊಬ್ಬರಿ 4 ಸಾವಿರ ರುಗಳಂತೆ ಮತದಾರರಿಗೆ ಹಣ ಹಂಚಿಕೆ ಮಾಡಿತ್ತು ಎಂದು ಹೇಳಲಾಗುತ್ತಿದೆ.
ಐಟಿ ದಾಳಿಗೊಳಗಾದವರಿಗೆ ಸಮನ್ಸ್ ಜಾರಿ
ಇನ್ನು ಇತ್ತೀಚೆಗೆ ಅದಾಯ ತೆರಿಗೆ ಅಧಿಕಾರಿಗಳಿಂದ ದಾಳಿಗೆ ಒಳಗಾದ ಸಚಿವ ವಿಜಯ ಭಾಸ್ಕರ್, ನಟ-ರಾಜಕಾರಣಿ ಶರತ್ ಕುಮಾರ್ ಹಾಗೂ ಡಾ| ಎಂಜಿಆರ್ ವಿಶ್ವವಿದ್ಯಾಲಯದ ಉಪಕುಲಪತಿ ಗೀತಾಲಕ್ಷ್ಮಿ ಅವರಿಗೆ ತೆರಿಗೆ ಇಲಾಖೆ ಸಮನ್ಸ್ ಜಾರಿ ಮಾಡಿದೆ. ಈ ವರೆಗೂ ಆದಾಯ ತೆರಿಗೆ ಅಧಿಕಾರಿಗಳು ಸುಮಾರು 50 ಪ್ರದೇಶಗಳಲ್ಲಿ ದಾಳಿ ನಡೆಸಿದ ಅಪಾರ ಪ್ರಮಾಣದ ನಗದು ವಶಪಡಿಸಿಕೊಂಡಿದ್ದಾರೆ.
Advertisement