ಮದುರೈ: ಡಾ.ಬಿ.ಆರ್ ಅಂಬೇಡ್ಕರ್ ಜಯಂತಿಯಂದೇ ಕೊಲೆ ಯತ್ನ, ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ 46 ವರ್ಷದ ದಲಿತ ವ್ಯಕ್ತಿಯನ್ನು ತಮಿಳುನಾಡು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದು, ಮದುರೈನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಡರೋಡೆ ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ದಲಿತ ವ್ಯಕ್ತಿ ಡಿ ಗೋವಿಂದನ್ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಈಗ ಹೆಣವಾಗಿ ಹೋಗಿದ್ದಾರೆ. ಮೇಲ್ಜಾತಿಯವರ ವಿರುದ್ಧ ಸೇಡು ತಿರಿಸಿಕೊಳ್ಳಲು ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಗೋವಿಂದನ್ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಿಂದನ್ ಅವರನ್ನು ನಾವು ಬಂಧಿಸಲು ಯತ್ನಿಸಿದೆವು. ಆದರೆ ಅವರು ನಮ್ಮ ಮೇಲೆ ಕುಡಗೋಲಿನಿಂದ ದಾಳಿ ಮಾಡಿದ್ದರಿಂದ ನಾವು ಗುಂಡು ಹಾರಿಸಬೇಕಾಯಿತು ಎಂದು ರಾಮನಾಥಪುರಂ ಪೊಲೀಸರು ತಿಳಿಸಿದ್ದಾರೆ.
ಗೋವಿಂದನ್ ರಾಮನಾಥಪುರಂನ ಪುಡುಕುಡಿ ಕಾಲೋನಿ ನಿವಾಸಿಯಾಗಿದ್ದು, ತನ್ನ ಸಹೋದರನ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೇಲ್ಜಾತಿ ವಕ್ತಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಆದರೆ ಕೋರ್ಟ್ ಪ್ರಕರಣದಲ್ಲಿ ಗೋವಿಂದನ್ ನಿರ್ದೋಷಿ ಎಂದು ಹೇಳಿತ್ತು.