ನವದೆಹಲಿ: ತೀವ್ರ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದ್ದ ದೆಹಲಿಯ ಮೂರು ಮಹಾನಗರ ಪಾಲಿಕೆಗಳ 272 ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟಗೊಳ್ಳಲಿದೆ.
ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಇಂದಿನ ಫಲಿತಾಂಶ ಭಾರೀ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿಯೇ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ದೆಹಲಿಯ ಒಟ್ಟು 35 ಕೇಂದ್ರಗಳಲ್ಲಿ ಮತಎಣಿಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತಿದ್ದು, ಉತ್ತರ ದೆಹಲಿಯಲ್ಲಿ 16, ದಕ್ಷಿಣ ದೆಹಲಿಯಲ್ಲಿ 13 ಹಾಗೂ ಪೂರ್ವ ದೆಹಲಿಯ 6 ಕೇಂದ್ರಗಳಲ್ಲಿ ಮತಎಣಿಕೆ ನಡೆಸಲಾಗುತ್ತಿದೆ.
ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹಿನ್ನಲೆಯಲ್ಲಿ ಈಗಾಗಲೇ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಅರೆಸೇನಾ ಪಡೆ, ಗೃಹ ರಕ್ಷಕ ದಳ ಸೇರಿದಂತೆ 90,000 ಸಾವಿರ ಭದ್ರತಾ ಸಿಬ್ಬಂದಿಗಳನ್ನು ದೆಹಲಿಯಲ್ಲಿ ನಿಯೋಜಿಸಲಾಗಿದೆ.
ಎರಡು ಚುನಾವಣೋತ್ತರ ಸಮೀಕ್ಷೆಗಳು, ಬಿಜೆಪಿಗೆ ಭರ್ಜರಿ ಬಹುಮತ ಸಿಗುವುದಾಗಿ ಹೇಳಿದೆ. ಒಂದು ವೇಳೆ ಮೂರು ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ, ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲುಕಂಡಿದ್ದ ಪಕ್ಷಕ್ಕೆ ಭಾರೀ ಜಯಸಿಕ್ಕಂತಾಗುತ್ತದೆ. ಜೊತೆಗೆ ದೆಹಲಿಯ ಮೇಲೆ ಪರೋಕ್ಷ ಹಿಡಿತ ಸಾಧಿಸಿದಂತಾಗುತ್ತದೆ.
ಮತ್ತೊಂದೆಡೆ ಆಪ್ ಸೋಲು ಕಂಡಿದ್ದೇ ಆದಲ್ಲಿ, ಪಂಜಾಬ್, ಗೋವಾ ವಿಧಾನಸಭಾ ಚುನಾವಣೆಯ ಬಳಿಕ ಆಪ್'ಗೆ ಮತ್ತೊಂದು ಶಾಕ್ ಹೊಡೆಯುವುದು ಖಚಿತ ಎನ್ನಲಾಗುತ್ತಿದೆ.
ಈ ನಡುವೆ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋತಿದ್ದೇ ಆದರೆ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ 34 ಆಪ್ ಶಾಸಕರು ಬಂಡಾಯವೇಳಲಿದ್ದಾರೆಂದು ದೆಹಲಿ ಬಿಜೆಪಿ ವಕ್ತಾರ ತೇಜಿಂದರ್ ಪಾಲ್ ಬಗ್ಗಾ ಭವಿಷ್ಯ ನುಡಿದಿದ್ದಾರೆ. ಆದರೆ, ಇದೆಲ್ಲಾ ಪಕ್ಷ ಒಡೆಯುವ ತಂತ್ರ ಎಂದು ಆಪ್ ನಾಯಕಿ ಅಲ್ಕಾ ಲಂಬಾ ತಿರುಗೇಟು ನೀಡಿದ್ದಾರೆ.