ನವದೆಹಲಿ: ಕುಪ್ವಾರ ಸೇನಾ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಮೂವರು ವೀರಯೋಧರ ತ್ಯಾಗಕ್ಕೆ ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿಯವರು ಗುರುವಾರ ಸೆಲ್ಯೂಟ್ ಹೊಡೆದಿದ್ದಾರೆ.
ಉಗ್ರರ ದಾಳಿ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಕುಟುಂಬಸ್ಥರ ಕುರಿತಂತೆ ಪ್ರಾರ್ಥನೆ ಮಾಡುತ್ತೇನೆ. ಗಾಯಗೊಂಡ ಯೋಧರು ಶೀಘ್ರಗತಿಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.
ದೇಶ ರಕ್ಷಿಸುವಲ್ಲಿ ನಮ್ಮ ಯೋಧರ ಆಗಾಧ ಧೈರ್ಯ ಎಲ್ಲರಿಗೂ ಆದರ್ಶವಾಗಿದೆ. ಯೋಧರ ತ್ಯಾಗ ಬಲಿದಾನಕ್ಕೆ ಸೆಲ್ಯೂಟ್ ಹೊಡೆಯುತ್ತಿದ್ದೇನೆಂದು ತಿಳಿಸಿದ್ದಾರೆ.
ಕಾಶ್ಮೀರದ ಕುಪ್ವಾರ ಜಿಲ್ಲೆಯ ಸೇನಾ ಶಿಬಿರದ ಮೇಲೆ ಇಂದು ಬೆಳಗ್ಗೆ ದಾಳಿ ಮಾಡಿದ್ದ ಉಗ್ರರು ಮೂವರು ಯೋಧರನ್ನು ಬಲಿಪಡೆದುಕೊಂಡಿದ್ದರು. ಉಗ್ರ ದಾಳಿಗೆ ದಿಟ್ಟ ಉತ್ತರ ನೀಡಿದ್ದ ಭಾರತೀಯ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿತ್ತು.