ನವದೆಹಲಿ: ಜಮ್ಮು ವಲಯದ ಪಾಕಿಸ್ತಾನದ ಭಾಗದಲ್ಲಿ ಗಡಿಯನ್ನು ಮುಚ್ಚುವುದು ತಕ್ಷಣದ ಆದ್ಯತೆಯಾಗಿದ್ದು ಸ್ಮಾರ್ಟ್ ತಂತ್ರಜ್ಞಾನ ಸಹಾಯದ ಬೇಲಿಯನ್ನು ಜಮ್ಮು ವಲಯದ ಉದ್ದಕ್ಕೂ ಮುಂದಿನ ವರ್ಷ ಮಾರ್ಚ್ ವೇಳೆಗೆ ನಿರ್ಮಿಸಲಾಗುವುದು ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಭಾರತ ದೇಶದ ಸಂಬಂಧ ಬಾಂಗ್ಲಾದೇಶದೊಂದಿಗೆ ಪ್ರಸ್ತುತ ಉತ್ತಮವಾಗಿದ್ದು, ಇದೇ ರೀತಿಯ ಬೇಲಿಯನ್ನು ಭಾರತ-ಬಾಂಗ್ಲಾ ಗಡಿಯಲ್ಲಿ ಕೂಡ ಸಂಪನ್ಮೂಲ ಸಂಗ್ರಹದ ನಂತರ ನಿರ್ಮಿಸುವ ಯೋಜನೆಯಿದೆ ಎಂದು ಗಡಿ ಭದ್ರತಾ ಪಡೆಯ ಮಹಾ ನಿರ್ದೇಶಕ ಕೆ.ಕೆ.ಶರ್ಮಾ ತಿಳಿಸಿದರು.
ನನ್ನ ಆದ್ಯತೆ ಪಾಕಿಸ್ತಾನಕ್ಕೆ. ಭಾರತ-ಪಾಕ್ ಗಡಿಭಾಗದಲ್ಲಿ ಏನೇ ಸಂಭವಿಸಿದರೂ ಕೂಡ ಅದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಜಮ್ಮು ವಲಯದಲ್ಲಿ ಸಂಪೂರ್ಣ ಬೇಲಿ ಹಾಕಿ ಅಲ್ಲಿ ಹೆಚ್ಚಿನ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ಮಹಾ ನಿರ್ದೇಶಕರು ಹೇಳಿದರು.
ಈ ಯೋಜನೆಯನ್ನು ಮುಂದಿನ ಮಾರ್ಚ್ ವೇಳೆಗೆ ಜಮ್ಮು ವಲಯದಲ್ಲಿ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.