ಮುಂಬೈ: ಜೋಡಿ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಿದ್ದ ಭೂಗತ ಪಾತಕಿ ಚೋಟಾ ರಾಜನ್ ಸಹಚರ ವಿನೀಶ್ ಶೆಟ್ಟಿಯನ್ನು ಮುಂಬೈನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ, ಚೋಟಾ ರಾಜನ್ ಸಹಚರ ವಿನೀಶ್ ಶೆಟ್ಟಿಯನ್ನು ಕೊಣಾಜೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ವಿನೀಶ್ ಶೆಟ್ಟಿಯನ್ನು ಮುಂಬೈ ಪೊಲೀಸರಿಂದ ಕೋಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಉಡುಪಿಯ ಶಿರ್ವ ನಿವಾಸಿಯಾಗಿರುವ ವಿನೇಶ್ ಶೆಟ್ಟಿ (44 ವರ್ಷ) ವಿರುದ್ಧ ಜೋಡಿ ಕೊಲೆ ಮಾಡಿದ ಆರೋಪವಿತ್ತು. 2003 ರಲ್ಲಿ ಕಪ್ಪು ಕಲ್ಲು ಕೋರೆ ಮಾಲೀಕ ವೇಣು ಗೋಪಾಲ ನಾಯಕ್ ಮತ್ತು ಅವರ ಚಾಲಕ ಸಂತೋಷ್ ಎಂಬವರನ್ನು ಮುಡಿಪು ಇರಾ ಕ್ರಾಸ್ ಸಮೀಪ ಕೊಲೆಗೈಯ್ಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇದರಲ್ಲಿ ಜಾಮೀನು ಪಡೆದಿದ್ದ ಆರೋಪಿ ವಿನೀಶ್ ಶೆಟ್ಟಿ 2015 ರವರೆಗೂ ವಿಚಾರಣೆಗೆ ಹಾಜರಾಗಿದ್ದು, ಬಳಿಕ ವಿನೇಶ್ ತಲೆಮರೆಸಿಕೊಂಡಿದ್ದ. ಹೀಗಾಗಿ ವಿನೀಶ್ ಶೆಟ್ಟಿ ವಿರುದ್ಧ ವಾರಂಟ್ ಜಾರಿಯಾಗಿತ್ತು. ವಿನೇಶ್ ವಿರುದ್ಧ ಮುಂಬೈ, ದಾವಣೆಗೆರೆ, ಪುಣೆ, ಹೈದರಬಾದ್, ಮಂಗಳೂರಿನಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ, ಕೊಲೆಯತ್ನ ಸಹಿತ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement