ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಹಿನ್ನಲೆಯಲ್ಲಿ ಸಿಆರ್ ಪಿಎಫ್ ಯೋಧರು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭದ್ರತೆಯನ್ನು ನೀಡುತ್ತಿದ್ದರು. ರಾತ್ರಿ 8.45ರ ಸುಮಾರಿಗೆ ಯೋಧರು ಸೇನಾ ಶಿಬಿರಗಳಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಬಂದಿರುವ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಹಿನ್ನಲೆಯಲ್ಲಿ ನಾಗರೀಕರಿಗೆ ಯಾವುದೇ ಸಮಸ್ಯೆಗಳಾಗಬಾರದೆಂಬ ಕಾರಣಕ್ಕೆ ಯೋಧರು ಗಾಳಿಯಲ್ಲಿ ಗುಂಡು ಹಾರಿಸಿ ಸ್ಥಳದಿಂದ ಜನರು ಚದುರುವಂತೆ ಮಾಡಿದ್ದರು ಎಂದು ಸಿಆರ್'ಪಿಎಫ್'ನ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೇಶ್ ಯಾದವ್ ಅವರು ಹೇಳಿದ್ದಾರೆ.
ದಾಳಿ ನಡೆಸಿದ ಬಳಿಕ ಉಗ್ರರು ಪರಾರಿಯಾದ ಹಿನ್ನಲೆಯಲ್ಲಿ ಉಗ್ರರನ್ನು ಸದೆಬಡಿಯಲು ಸೇನಾಪಡೆ ಭಾರೀ ಕಾರ್ಯಾಚರಣೆಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.