ಎಐಎಡಿಎಂಕೆಯಿಂದ ಟಿಟಿವಿ ದಿನಕರನ್ ಉಚ್ಛಾಟನೆ: ಶಶಿಕಲಾಗೂ ಗೇಟ್ ಪಾಸ್ ನೀಡಲು ಸಿದ್ಧತೆ!

ಮಹತ್ವದ ಬೆಳವಣಿಗೆಯಲ್ಲಿ ಶಶಿಕಲಾ ಆಪ್ತ ಹಾಗೂ ಎಐಎಡಿಎಂಕೆ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ಶಶಿಕಲಾ ಆಪ್ತ ಹಾಗೂ ಎಐಎಡಿಎಂಕೆ ಉಪ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.

ಚುನಾವಣಾ ಆಧಿಕಾರಿಗಳಿಗೆ ಲಂಚದ ಆಮಿಷ ಒಡ್ಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದ ಆರೋಪದ ಮೇರೆಗೆ ಮತ್ತು ಉಪ ಕಾರ್ಯದರ್ಶಿಯಾಗಿ ನೇಮಕವಾದ ಪ್ರಕ್ರಿಯೆಯೇ ನಿಯಮ ಬಾಹಿರ ಎಂದು ಟಿಟಿವಿ ದಿನಕರನ್ ಅವರನ್ನು  ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಪಕ್ಷದ ನಿಯಮಾವಳಿ 30 (5)ರ ಅನ್ವಯ ಪ್ರಧಾನ ಕಾರ್ಯದರ್ಶಿ ನೇಮಕವಾದ 24 ಗಂಟೆಗಳ ಅವಧಿಯೊಳಗೆ ಉಪ ಕಾರ್ಯದರ್ಶಿ ನೇಮಕವಾಗಿದ್ದು, ನಿಯಮಾವಳಿ ಸ್ಪಷ್ಟ  ಉಲ್ಲಂಘನೆಯಾಗಿದೆ. ಹೀಗಾಗಿ ಟಿಟಿನಿ ದಿನಕರನ್ ನೇಮಕ ಅಸಿಂಧುಗೊಳಿಸಿ, ಅವರ ನೇಮಕಗಳಿಗೆ ಅನುಮೋದನ ನೀಡದಂತೆ ತಡೆಹಿಡಿಯಲು ನಿರ್ಧರಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಕಾರಣದಿಂದಾಗಿ ಟಿಟಿವಿ ದಿನಕರನ್ ಅವರನ್ನು 2011ರ ಡಿಸೆಂಬರ್ 19ರಂದು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಆದರೆ ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಬಳಿಕ ಉಂಟಾಗಿದ್ದ ಕೆಲ  ಅನಿವಾರ್ಯ ಪರಿಸ್ಥಿತಿಗಳಿಂದಾಗಿ ಶಶಿಕಲಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾದ ಬೆನ್ನಲ್ಲೇ ಅಂದರೆ 2017ರ ಫೆಬ್ರವರಿ 14ರಂದು ಚಿನ್ನಮ್ಮ ತಮ್ಮ ಸಂಬಂಧಿ ಟಿಟಿವಿ  ದಿನಕರನ್ ಅವರನ್ನು ಪಕ್ಷದ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಇದು ಪಕ್ಷದ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿ ಟಿಟಿವಿ ದಿನಕರನ್ ಆಯ್ಕೆಯನ್ನು ಅನೂರ್ಜಿತಗೊಳಿಸಲಾಗಿದೆ.

ಶಶಿಕಲಾಗೂ ಪಕ್ಷದಿಂದ ಗೇಟ್ ಪಾಸ್ ನೀಡಲು ಸಿದ್ಧತೆ
ಇನ್ನು ಇದೇ ಸಂದರ್ಭದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ವಿಕೆ ಶಶಿಕಲಾ ಅವರಿಗೂ ಪಕ್ಷದಿಂದ ಗೇಟ್ ಪಾಸ್ ನೀಡಲು ಸಿದ್ಧತೆ ಆರಂಭಿಸಲಾಗಿದ್ದು, ನೂತನ ಪ್ರಧಾನ ಕಾರ್ಯದರ್ಶಿ ಆಯ್ಕೆಗೆ ಚಾಲನೆ  ನೀಡಲಾಗಿದೆ. ನೂತನ ಪ್ರಧಾನ ಕಾರ್ಯದರ್ಶಿ ಆಯ್ಕೆಯಾದ ಬಳಿಕ ಶಶಿಕಲಾ ಅವರನ್ನೂ ಕೂಡ ಪಕ್ಷದಿಂದ ಉಚ್ಛಾಟನೆ ಮಾಡಲು ಎಐಎಡಿಎಂಕೆ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಬಗ್ಗೆ ಪಕ್ಷದ ಮುಖಂಡರು ನಿರ್ಣಯ  ಕೈಗೊಳ್ಳಲಾಗಿದೆ.

ದಿನಕರನ್ ನೇಮಕ ಪ್ರಕ್ರಿಯೆಯೇ ಸಾಕಷ್ಟು ಗೊಂದಲಗಳಿಂದ ಕೂಡಿದ್ದು, ಇದು ಪಕ್ಷದ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಟಿಟಿವಿ ದಿನಕರನ್ ಅವರ ಆಯ್ಕೆ ಆಸಿಂಧುಗೊಳಿಸಿ ಅವರನ್ನು ಪಕ್ಷದಿಂದಲೇ  ಉಚ್ಚಾಟನೆ ಮಾಡಲಾಗಿದೆ ಎಂದು ಎಐಎಡಿಎಂಕೆ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com