ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಇಡೀ ದೇಶಕ್ಕೆ ಆಚರಿಸಲು ಇರುವುದೇ ಹೊರತು ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಅಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿದೆ.
ಆರ್ಎಸ್ಎಸ್ ನಾಯಕ ರಾಕೇಶ್ ಸಿನ್ಹಾ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರ ತಡೆಯೊಡ್ಡಿದರೂ ಕೂಡ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶಾಲೆಯೊಂದರಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು.ಸ್ವಾತಂತ್ರ್ಯ ಚಳವಳಿಯೆಂಬುದು ರಾಷ್ಟ್ರೀಯ ಹಬ್ಬ. ಇದು ಸಂಪ್ರದಾಯವಲ್ಲ ಅಥವಾ ರಾಜ್ಯದ ಹಬ್ಬವಲ್ಲ. ಸ್ವಾತಂತ್ರ್ಯ ದಿನಾಚರಣೆಯಿರುವುದು ಇಡೀ ದೇಶಕ್ಕೆ ಹೊರತು ನಿರ್ದಿಷ್ಟ ರಾಜಕೀಯ ಪಕ್ಷಕ್ಕಲ್ಲ ಎಂದು ಹೇಳಿದರು.
ಆರ್ಎಸ್ಎಸ್ ಕಳೆದ 90 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಅದರ ಉದ್ದೇಶ ಒಂದೇ, ಎಲ್ಲಾ ಆಯಾಮಗಳಲ್ಲಿನ ಜನರು ಜಾತಿವಾದ ಮತ್ತು ಉದಾರವಾದದಿಂದ ದೂರವಿರಬೇಕು ಎಂಬುದಾಗಿದೆ ಎಂದರು.
ಆರ್ಎಸ್ಎಸ್ ಹಿರಿಯ ನಾಯಕ ಎಂ.ಜಿ.ವೈದ್ಯ, ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರವಿದ್ದು, ಕಮ್ಯುನಿಸಂ ಇರುವ ಜಾಗದಲ್ಲಿ ಇತರ ತತ್ವ, ಸಿದ್ದಾಂತಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ ಎಂದರು.
ಶಾಲೆಯಲ್ಲಿ ಧ್ವಜ ಹಾರಿಸಲು ಮೋಹನ್ ಭಾಗವತ್ ಅವರಿಗೆ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ ನಂತರ ಅವರು ಧ್ವಜ ಹಾರಿಸಿ ಬಂದಿದ್ದಾರೆ ಎಂದು ಗೊತ್ತಾಯಿತು. ಅವರು ತಮ್ಮ ತಪ್ಪನ್ನು ಅರ್ಥೈಸಿಕೊಂಡು ಕೊನೆಗೂ ಅವಕಾಶ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಆರಂಭದಲ್ಲಿ ಭಾರೀ ವಿರೋಧದ ನಂತರ ಮೋಹನ್ ಭಾಗವತ್ ಅವರಿಗೆ ಕೇರಳದ ಕರ್ನಕ್ಕಿಯಮನ್ ಶಾಲೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಇಂದು 71ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಅವಕಾಶ ನೀಡಲಾಯಿತು.
ಇದಕ್ಕೂ ಮುನ್ನ ಜಿಲ್ಲಾಡಳಿತ ಶಾಲೆಗೆ ಮೆಮೊ ಹೊರಡಿಸಿ, ಅನುದಾನಿತ ಶಾಲೆಯಲ್ಲಿ ರಾಜಕೀಯ ವ್ಯಕ್ತಿ ತ್ರಿವರ್ಣ ಧ್ವಜ ಹಾರಿಸುವುದು ಸೂಕ್ತವಲ್ಲ. ಶಾಲೆಯ ಅಧ್ಯಾಪಕರು ಅಥವಾ ಚುನಾಯಿತ ಪ್ರತಿನಿಧಿಗಳು ಮಾತ್ರ ತ್ರಿವರ್ಣ ಧ್ವಜ ಹಾರಿಸಬಹುದೆಂದು ಹೇಳಿತ್ತು.