ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ದೇಶ
ರಸ್ತೆಗಳಲ್ಲಿನ ನಮಾಜ್ ತಡೆಯಲಾಗದ ನನಗೆ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಣೆ ತಡೆಯುವ ಹಕ್ಕಿಲ್ಲ: ಸಿಎಂ ಯೋಗಿ
ಈದ್ ಹಬ್ಬದ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದ ಮೇಲೆ ಪೊಲೀಸ್ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಿಸುವುದನ್ನೂ ತಡೆಯುವ ಹಕ್ಕು ನನಗಿಲ್ಲ ಎಂದು...
ಲಖನೌ: ಈದ್ ಹಬ್ಬದ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದ ಮೇಲೆ ಪೊಲೀಸ್ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಿಸುವುದನ್ನೂ ತಡೆಯುವ ಹಕ್ಕು ನನಗಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಹೇಳಿದ್ದಾರೆ.
ನೊಯ್ಡಾದಲ್ಲಿ 'ಪ್ರೇರಣಾ ಜನಸಂಚಾರ್ ಏವಂ ಸಿದ್ಧ ಸಂಸ್ಥಾನ' ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ನಿಯಮಗಳು ಸಮಾಜದ ಎಲ್ಲ ವಿಭಾಗಗಳಿಗೂ ಅನ್ವಯವಾಗಬೇಕು. ಈದ್ ಸಂದರ್ಭದಲ್ಲಿ ರಸ್ತೆಗಳಲ್ಲಿ ಮುಸ್ಲಿಮರು ನಮಾಜ್ ಮಾಡುವುದನ್ನು ತಡೆಯಲು ಸಾಧ್ಯವಾಗದ ನನಗೆ, ಪೊಲೀಸ್ ಠಾಣೆಗಳಲ್ಲಿ ಜನ್ಮಾಷ್ಟಮಿ ಆಚರಿಸುವುದನ್ನೂ ತಡೆಯುವ ಹಕ್ಕಿಲ್ಲ ಎಂದು ಹೇಳಿದ್ದಾರೆ.
ಕನ್ವಾರ್ ಯಾತ್ರೆ ಸಂದರ್ಭದಲ್ಲಿ ಡಿಜೆ ಸಿಸ್ಟಿಂ ಹಾಗೂ ಧ್ವನಿವರ್ಧಕಗಳ ಬಳಕೆಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದರು.
ಮೈಕ್ರೋಫೋನ್ ಗಳು, ಧ್ವನಿವರ್ಧಕಗಳ ಬಳಕೆಯನ್ನು ಎಲ್ಲಾ ಪುಣ್ಯಕ್ಷೇತ್ರಗಳಲ್ಲೂ ನಿಷೇಧಿಸಲು ಸಾಧ್ಯವೇ ಎಂದು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಈ ವೇಳೆ ಅಧಿಕಾರಿಗಳು ಅದು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ಕನ್ವಾಯ್ ಯಾತ್ರೆಯೂ ಎಂದಿನಂತೆಯೇ ನಡೆಯಲಿ ನಿರ್ಬಂಧ ಹೇರುವುದು ಬೇಡ ಎಂದು ಸೂಚಿಸಿದ್ದೆ.
ದೇಶದಲ್ಲಿರುವ ಪ್ರತೀಯೊಬ್ಬರಿಗೂ ಹಬ್ಬಗಳನ್ನು ಆಚರಿಸುವ ಸ್ವಾತಂತ್ರ್ಯವಿದೆ. ದೇಶದ ಸಾಂಸ್ಕೃತಿಕ ಏಕತೆಯನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವವರನ್ನು ಕೋಮುವಾದಿಗಳೆಂದು ಕರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗೋರಖ್'ಪುರ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮಕ್ಕಳ ಮಾರಣ ಹೋಮ ಮುಂದುವರೆಯುತ್ತಿರುವ ಸಂದರ್ಭದಲ್ಲಿಯೇ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಎಲ್ಲಾ ಪೊಲೀಸರು ಆಚರಿಸುವಂತೆ ಈ ಹಿಂದೆ ಉತ್ತರಪ್ರದೇಶ ಸರ್ಕಾರ ಸೂಚನೆ ನೀಡಿತ್ತು. ಇದು ತೀವ್ರ ಆಕ್ರೋಶಗಳಿಗೆ ಕಾರಣವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ