ಲಕ್ನೋ: ಭಾರತದಲ್ಲಿ ಸದಾ ಕಾಡುತ್ತಿರುವ ಕಾಶ್ಮೀರ ವಿವಾದ, ನಕ್ಸಲ್ ಈಶಾನ್ಯ ಬಂಡಾಯ ಹಾಗೂ ಭಯೋತ್ಪಾದಕರ ಸಮಸ್ಯೆಗಳು 2022ರ ವೇಳೆಗೆ ಬಗೆಹರಿಯುತ್ತವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲಕ್ನೋದಲ್ಲಿ ನಡೆದ ಸಂಕಲ್ಪ ಸೆ ಸಿದ್ದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನರೇಂದ್ರ ಮೋಜಿ ಸರ್ಕಾರ 2022ರ ವೇಳೆಗೆ ಹೊಸ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡಿದೆ ಎಂದು ಹೇಳಿದ್ದಾರೆ.
ದೇಶದಲ್ಲಿರುವ ನಕ್ಸಲೈಟ್ಸ್, ಕಾಶ್ಮೀರ ವಿವಾದ ಹಾಗೂ ಈಶಾನ್ಯ ರಾಜ್ಯಗಳ ಬಂಡಾಯದ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ, 2022ರ ವೇಳೆಗೆ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಕಾಶ್ಮೀರ ಪ್ರತ್ಯೇಕತಾವಾದಿಗಳ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಅಧಿಕಾರಿಗಳು ದಾಳಿ ನಡೆಸಿದ್ದನ್ನು ರಾಜನಾಥ್ ಸಿಂಗ್ ಸಮರ್ಥಿಸಿಕೊಂಡರು. ಕಾಶ್ಮೀರದಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಪಾಕಿಸ್ತಾನದಿಂದ ಹಣ ಪೂರೈಕೆಯಾಗುತ್ತಿದೆ ಎಂಬ ತನಿಖೆ ನಡೆಸಲು ಶ್ರೀನಗರಕ್ಕೆ ಎನ್ ಐ ಎ ತಂಡ ಭೇಟಿ ನೀಡಿತ್ತು.