ಚೆನ್ನೈ: ಆರ್ ಕೆ ನಗರ ಉಪ ಚುನಾವಣೆ ಬಳಿಕ ಬಂಡಾಯ ನಾಯಕ ಟಿಟಿವಿ ದಿನಕರನ್ ಬೆಂಬಲಿಗ ನಾಯಕರ ವಿರುದ್ಧ ಎಐಎಡಿಎಂಕೆ ಕಠಿಣ ಕ್ರಮ ತೆಗೆದುಕೊಂಡಿದ್ದು, ದಿನಕರನ್ ಬೆಂಬಲ 44 ಮಂದಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಿದೆ.
ದಿನಕರನ್ ಬೆಂಬಲಿತ 44 ನಾಯಕರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಎಐಎಡಿಎಂಕೆ ಸಂಚಾಲಕ ಒ ಪನ್ನೀರ್ ಸೇಲ್ವಂ ಹಾಗೂ ಸಹ ಸಂಚಾಲಕ ಕೆ ಪಳನಿಸ್ವಾಮಿ ಅವರು ಘೋಷಿಸಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದ ಮೇಲೆ ಎಐಎಡಿಎಂಕೆಯ ಮಧುರೈ, ವಿಲ್ಲುಪುರಂ, ಧರ್ಮಪುರಿ, ತಿರುಚಿರಾಪಳ್ಳಿ ಹಾಗೂ ಪೆರಂಬಲೂರು ಘಟದ ವಿವಿಧ ನಾಯಕರನ್ನು ಉಚ್ಚಾಟಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.