ಅಹ್ಮದಾಬಾದ್: ಭಾರತದ ಖ್ಯಾತ ಅಂಕಣಕಾರ, ಹಾಸ್ಯ ಲೇಖಕ ಹಾಗೂ ನಾಟಕಕಾರ ತಾರಕ್ ಮೆಹ್ತಾ ಅವರು ಬುಧವಾರ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ತಾರಕ್ ಮೆಹ್ತಾ ಅವರು ಇಂದು ನಿಧನರಾಗಿದ್ದು, ಅವರ ನಿಧನಕ್ಕೆ ಖ್ಯಾತ ಪತ್ರಕರ್ತರು, ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ. ತಮ್ಮ ಹಾಸ್ಯ ಲೇಖನ ಮತ್ತು ವಿಡಂಬನಾತ್ಮಕ ಅಂಕಣಗಳಿಂದ ಖ್ಯಾತಿ ಗಳಿಸಿದ್ದ ತಾರಕ್ ಮೆಹ್ತಾ ಅವರು ಗುಜರಾತ್ ಭಾಷೆಯಲ್ಲಿ ಬರೆದಿದ್ದ ಅಂಕಣವನ್ನು ಆಧರಿಸಿ 2008ರಲ್ಲಿ ಸಬ್ ಟಿವಿಯಲ್ಲಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಎಂಬ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಿಂದಾಗಿ ಚಾನಲ್ಗೆ ಭಾರೀ ಖ್ಯಾತಿ ಗಳಿಸಿತ್ತು. ಸಾಮಾನ್ಯ ಸಾಮಾಜಿಕ ಬೆಳವಣಿಗೆಗಳು ಹಾಗೂ ಜನಜೀವನದಲ್ಲಿನ ಸಣ್ಣ ಬದಲಾವಣೆಗಳನ್ನು ತಮ್ಮ ಹಾಸ್ಯ ಬರವಣಿಗೆ ಮೂಲಕ ತಾರಕ್ ಮೆಹ್ತಾ ವಿಡಂಬನೆ ಮಾಡುತ್ತಿದ್ದರು.
2015ರಲ್ಲಿ ತಾರಕ್ ಮೆಹ್ತಾ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಗಾಗಿ ಪದ್ಮಶ್ರೀ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗಿತ್ತು. ಮೃತರು ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಇದೇ ಕಾರಣಕ್ಕೆ ಸಬ್ ಟಿವಿ ಕಾರ್ಯಕ್ರಮ ಯಶಸ್ಸು ಸಾಧಿಸಿತ್ತು. ತಾರಕ್ ಮೆಹ್ತಾ ಖ್ಯಾತ ಪತ್ರಿಕೆಗಳಾದ ದಿವ್ಯ ಭಾಸ್ಕರ್, ಚಿತ್ರಲೇಖಾದಂತಹ ಖ್ಯಾತ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಳೆದ 16 ವರ್ಷಗಳಿಂದ ಗುಜರಾತ್ ಅಹ್ಮದಾಬಾದ್ ನಲ್ಲಿ ನೆಲೆಸಿದ್ದರು. ಮೆಹ್ತಾ ನಿಧನಕ್ಕೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೋಕ ವ್ಯಕ್ತಪಡಿಸಿದ್ದು, "ಗುಜರಾತ್ನ ಲೇಖಕ ಹಾಗೂ ಪದ್ಮಶ್ರೀ ಪುರಸ್ಕೃತ ತಾರಕ್ ಮೆಹ್ತಾ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.
Advertisement