ಕೋಲ್ಕತಾ: ರೋಸ್ ವ್ಯಾಲಿ ಚಿಟ್ ಫಂಡ್ ಹಗರಣದ ಸಂಬಂಧ ಟಿಎಂಸಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರನ್ನು ಬಂಧನಕ್ಕೊಳಪಡಿಸುತ್ತಿದ್ದಂತೆ ಪಶ್ಚಿಮಬಂಗಾಳದಲ್ಲಿ ರಾಜಕೀಯ ಹಗ್ಗಜಗ್ಗಾಟ ತಾರಕ್ಕೇರಿದೆ.
ನಿನ್ನೆಯಷ್ಟೇ ಬಿಜೆಪಿ ಕಚೇರಿ ಮೇಲೆ ದಾಳಿ ನಡೆಸಿ ಬಿಜೆಪಿ ಕಾರ್ಯಕರ್ತರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇದಾದ ಬಳಿಕ ಕಳೆದ ರಾತ್ರಿ ಬಿಜೆಪಿ ನಾಯಕಿ ಕೃಷ್ಣ ಭಟ್ಟಾಚಾರ್ಯ ಅವರ ನಿವಾಸದ ಮೇಲೂ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದು, ಭಟ್ಟಾಚಾರ್ಯ ಅವರನ್ನು ಥಳಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಕೋಲ್ಕತಾದ ಉತ್ತರ್ಪಾರ ಪ್ರದೇಶದಲ್ಲಿರುವ ಭಟ್ಟಾಚಾರ್ಯ ಅವರ ನಿವಾಸದ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇದಲ್ಲದೆ, ಭಟ್ಟಾಚಾರ್ಯ ಅವರ ನಿವಾಸದ ಮೇಲೆ ಬಾಂಬ್ ಎಸೆದಿರುವುದಾಗಿಯೂ ವರದಿಗಳು ತಿಳಿಸಿವೆ.
ಕಳೆದ ರಾತ್ರಿ 9.30ರ ಸುಮಾರಿಗೆ ಟಿಎಂಸಿ ಪಕ್ಷದ ಕಾರ್ಯಕರ್ತರು ಮನೆಯ ಮೇಲೆ ದಾಳಿ ನಡೆಸಿದ್ದರು. ಕಣ್ಣ ಎದುರಿಗೇ ಮನೆ ಮೇಲೆ ಬಾಂಬ್ ಎಸೆದಿದ್ದರು. ಅಲ್ಲದೆ, ನನ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು. ಕೆಲ ನಿಮಿಷದ ಬಳಿಕ ನಾನು ಪ್ರಜ್ಞೆಕಳೆದುಕೊಂಡಿದ್ದೆ ಎಂದು ಕೃಷ್ಣ ಭಟ್ಟಾಚಾರ್ಯ ಅವರು ಹೇಳಿಕೊಂಡಿದ್ದಾರೆ.
ಗಾಯಗೊಂಡ ಕೃಷ್ಣ ಭಟ್ಟಾಚಾರ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Advertisement