ನವದೆಹಲಿ: ವಾಯು ಮಾಲಿನ್ಯದಿಂದಾಗಿ ದೇಶದಲ್ಲಿ ಪ್ರತಿವರ್ಷ 12 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದು, ದೇಶದ 20 ಅತ್ಯಂತ ಹೆಚ್ಚು ವಾಯು ಮಾಲಿನ್ಯ ಪೀಡಿತ ನಗರಗಳ ಪೈಕಿ ರಾಷ್ಟ್ರರಾಜಧಾನಿ ದೆಹಲಿ ಮೊದಲ ಸ್ಥಾನ ಪಡೆದಿದೆ.
ಗ್ರೀನ್ ಪೀಸ್ ಇಂಡಿಯಾ ಬಿಡುಗಡೆ ಮಾಡಿರುವ ವರದಿ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಗಾಳಿಯ ಗುಣಮಟ್ಟವನ್ನು ಪರಿಶೀಲಿಸಲಾಗಿದ್ದು, ದೇಶದಲ್ಲಿ 168 ನಗರಗಳು ವಾಯು ಮಾಲಿನ್ಯ ಮುಕ್ತವಾಗಿವೆ ಎಂದು ತಿಳಿಸಿದೆ.
ವಾಯು ಮಾಲಿನ್ಯದಿಂದಾಗಿ ದೇಶಾದ್ಯಂತ ಪ್ರತಿ ವರ್ಷ 12 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ ಮತ್ತು ವಾಯು ಮಾಲಿನ್ಯದಿಂದಾಗಿ ಶೇ.3ರಷ್ಟು ಜಿಡಿಪಿಯನ್ನು ಕಳೆದುಕೊಂಡಿದೆ ಎಂದು ಗ್ರೀನ್ ಪೀಸ್ ಇಂಡಿಯಾ ವರದಿ ವಿವರಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ, ದಕ್ಷಿಣ ಭಾರತದ ಕೆಲವೇ ನಗರಗಳು ಮಾತ್ರ ವಾಯು ಮಾಲಿನ್ಯದಿಂದ ಬಳಲುತ್ತಿವೆ. ಅತ್ಯಂತ ಹೆಚ್ಚು ಮಾಲಿನ್ಯ ಪೀಡಿತ ನಗರಳ ಪೈಕಿ ದೆಹಲಿ ಮೊದಲ ಸ್ಥಾನ ಪಡೆದರೆ, ಘಾಜಿಯಾಬಾದ್, ಅಲಹಬಾದ್ ಮತ್ತು ಬರೇಲಿ ನಂತರದ ಸ್ಥಾನದಲ್ಲಿವೆ.