ನವದೆಹಲಿ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ನೋಟು ಅಮಾನ್ಯದ ನಿರ್ಧಾರಕ್ಕೆ ಜನಮತವಾಗಲು ಸಾಧ್ಯವಿಲ್ಲವಾದರೂ, ಪ್ರತಿಪಕ್ಷಗಳು ಅದನ್ನೇ ಪ್ರಧಾನವಾಗಿ ಪರಿಗಣಿಸುವುದಾದರೆ ಬಿಜೆಪಿ ಪ್ರತಿಪಕ್ಷಗಳ ಸವಾಲಿಗೆ ಸಿದ್ಧವಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಆದರೆ ಪ್ರತಿಪಕ್ಷಗಳು ಚುನಾವಣಾ ಫಲಿತಾಂಶವನ್ನು ನೋಟು ನಿಷೇಧದ ಬಗೆಗಿನ ಜನಮತವೆಂದು ಪರಿಗಣಿಸುವುದಾದರೆ ಬಿಜೆಪಿ ಆ ಸವಾಲನ್ನು ಸ್ವೀಕರಿಸಲು ಸಿದ್ಧವಿದೆ ಎಂದು ಶಾ ಸಿಎನ್ಎನ್ ಐಬಿಎನ್ ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಿ ಸರ್ಕಾರ ರಚನೆ ಮಾಡಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಹಾಗೂ ಹೆಚ್ಚಿರುವ ಭ್ರಷ್ಟಾಚಾರದಿಂದ ವಿಷಯಾಂತರ ಮಾಡಲು ಸಿಎಂ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದ ಕುಟುಂಬ ಕಲಹದಲ್ಲಿ ಶಾಮೀಲಾಗಿದ್ದರು ಎಂದು ಅಮಿತ್ ಶಾ ಆರೋಪಿಸಿದ್ದಾರೆ.
ಇದೇ ವೇಳೆ ಮೀಸಲಾತಿ ಕುರಿತು ಆರ್ ಎಸ್ಎಸ್ ಮುಖಂಡ ಮೋಹನ್ ವೈದ್ಯ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಮಿತ್ ಶಾ, ಬಿಜೆಪಿ ಹಾಗೂ ಆರ್ ಎಸ್ಎಸ್ ಮೀಸಲಾತಿ ವಿರುದ್ಧ ಇಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ.