ಉತ್ತರ ಪ್ರದೇಶ ಸರ್ಕಾರದ ಗೋ ಕಲ್ಯಾಣ ಅನುದಾನ; ಅಖಿಲೇಶ್ ಸಹೋದರಿಯ ಎನ್ ಜಿಒಗೆ ಸಿಂಹಪಾಲು!

ಹಸುಗಳ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೀಡುವ ಗೋ ಕಲ್ಯಾಣ ಅನುದಾನದ ಪೈಕಿ ಶೇ.86ರಷ್ಟು ಅನುದಾನದ ಹಣವನ್ನು ಮುಲಾಯಂ ಸಿಂಗ್ ಯಾದವ್ ಪುತ್ರಿ ಅಪರ್ಣಾ ಯಾದವ್ ಅವರ ಜೀವ್ ಆಶ್ರಯ ಎನ್ ಜಿಒ ಪಡೆದಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಲಖನೌ: ಹಸುಗಳ ಸಂರಕ್ಷಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೀಡುವ ಗೋ ಕಲ್ಯಾಣ ಅನುದಾನದ ಪೈಕಿ ಶೇ.86ರಷ್ಟು ಅನುದಾನದ ಹಣವನ್ನು ಮುಲಾಯಂ ಸಿಂಗ್ ಯಾದವ್ ಪುತ್ರಿ ಅಪರ್ಣಾ ಯಾದವ್ ಅವರ ಜೀವ್ ಆಶ್ರಯ  ಎನ್ ಜಿಒ ಪಡೆದಿದೆ ಎಂದು ತಿಳಿದುಬಂದಿದೆ.

ಆರ್ ಟಿಐ ಅರ್ಜಿಯೊಂದರ ಮೂಲಕ ಈ ಮಾಹಿತಿ ಬಹಿರಂಗವಾಗಿದ್ದು, ಆರ್ ಟಿಐ ಕಾರ್ಯಕರ್ತೆ ನೂತನ್ ಠಾಕೂರ್ ಎಂಬುವವರು ಉತ್ತರ ಪ್ರದೇಶ ಸರ್ಕಾರದಿಂದ ಗೋ ಕಲ್ಯಾಣ ಯೋಜನೆಯಡಿಯಲ್ಲಿ ಯಾವ ಸಂಸ್ಥೆಗಳಿಗೆ  ಎಷ್ಟೆಷ್ಟು ಅನುದಾನ ನೀಡಲಾಗಿತ್ತು ಎಂದು ಪ್ರಶ್ನಿಸಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಉತ್ತರ ಪ್ರದೇಶ ಸರ್ಕಾರದ ಗೋ ಸೇವಾ ಆಯೋಗ ಸಂಪೂರ್ಣ ವಿವರ ನೀಡಿದೆ. ಗೋ ಸೇವಾ ಆಯೋಗ ನೀಡಿರುವ  ಮಾಹಿತಿಯಂತೆ 2012ರಿಂದ 2015ರವರೆಗೂ ಸರ್ಕಾರ ಒಟ್ಟು 9.66 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ ಶೇ.86ರಷ್ಟು ಅಂದರೆ ರು. 8.35 ಕೋಟಿ ಹಣವನ್ನು ಅಪರ್ಣಾ ಯಾದವ್ ಅವರ ಜೀವ್ ಆಶ್ರಯ ಎನ್ ಜಿಒಗೆ  ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮಾಹಿತಿ ಹಕ್ಕು ಆಯೋಗದ ಅಧಿಕಾರಿ ಸಂಜಯ್ ಯಾದವ್ ಅವರು, 2012-2013ರ ಆರ್ಥಿಕ ವರ್ಷದಲ್ಲಿ 49.89 ಲಕ್ಷ ರು. 2013-14ನೇ ಸಾಲಿನಲ್ಲಿ 1.25 ಕೋಟಿ ರು. ಮತ್ತು 2014-15ನೇ ಸಾಲಿನಲ್ಲಿ 1.41  ಕೋಟಿ ರು.ಅನುದಾನ ನೀಡಲಾಗಿದೆ. 2015-16ನೇ ಸಾಲಿನಲ್ಲಿ ಅಪರ್ಣಾ ಯಾದವ್ ಅವರ ಜೀವ್ ಆಶ್ರಯ ಸಂಸ್ಥೆಗೆ 2.58 ಕೋಟಿ ರು. ನೀಡಲಾಗಿದ್ದು, ಬೃಂದಾವನದಲ್ಲಿರುವ ಶ್ರೀಪಾದ್ ಬಾಬಾ ಗೋಶಾಲೆಗೆ 41 ಲಕ್ಷ ರು.ಅನುದಾನ  ನೀಡಲಾಗಿದೆ ಎಂದು ಎಂದು ಹೇಳಿದರು.

ಇನ್ನು 2016-17ನೇ ಸಾಲಿನಲ್ಲಿ ಉತ್ತರ ಪ್ರದೇಶ ಸರ್ಕಾರ ಒಟ್ಟು 3.45 ಕೋಟಿ ರು.ಅನುದಾನ ಬಿಡುಗಡೆ ಮಾಡಿದ್ದು, ಈ ಪೈಕಿ ಜೀವ್ ಆಶ್ರಯ ಸಂಸ್ಥೆಗೆ 2.55 ಕೋಟಿ ರು.ಅನುದಾನ ನೀಡಲಾಗಿದೆ. ಶ್ರೀಪಾದ್ ಬಾಬಾ ಗೋಶಾಲೆಗೆ 63  ಲಕ್ಷ ರು. ನೀಡಲಾಗಿದೆ ಎಂದು ತಿಳಿದುಬಂದಿದೆ.

ಲಖನೌನ ಅಮೌಸಿ ಪ್ರದೇಶದಲ್ಲಿ ಅಪರ್ಣಾ ಯಾದವ್ ಹಾಗೂ ಅವರ ಪತಿ ಪ್ರತೀಕ್ ಯಾದವ್ ಅವರ ಜೀವ್ ಆಶ್ರಯ ಗೋಶಾಲೆಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್  ಅವರು ಈ ಗೋಶಾಲೆಗೆ ಭೇಟಿ ನೀಡಿ ಗಮನ ಸೆಳೆದಿದ್ದರು.

ಯಾರೂ ಈ ನೂತನ್ ಠಾಕೂರ್
ಅರ್ ಟಿಐ ಕಾರ್ಯಕರ್ತೆ ನೂತನ್ ಠಾಕೂರ್ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ ಅಮಿತಾಬ್ ಠಾಕೂರ್ ಅವರ ಪತ್ನಿಯಾಗಿದ್ದು, ಈ ಹಿಂದೆ ಅಮಿತಾಬ್ ಠಾಕೂರ್ ಅವರು ಎಸ್ ಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲೇ  ಯಾದವ್ ಕುಟುಂಬದ ವಿರುದ್ಧ ಕಿಡಿಕಾರಿದ್ದರು. ತಪ್ಪು ಮಾಡಿ ಸಿಕ್ಕಿಬಿದ್ದಿದ್ದ ಸಮಾಜವಾದಿ ಪಕ್ಷದ ಕಾರ್ಯಕರ್ತರನ್ನು ಮುಲಾಜಿಲ್ಲದೇ ಜೈಲಿಗೆ ಅಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com