ನವದೆಹಲಿ: ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಮಿಸಲಾತಿ ಅಡಿಯಲ್ಲಿ ಪ್ರವೇಶ ಹಾಗೂ ಸರ್ಕಾರಿ ಉದ್ಯೋಗ ಪಡೆದರೇ ಅದಕ್ಕೆ ಮಾನ್ಯತೆಯಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮುಖ್ಯನ್ಯಾಯಮೂರ್ತಿ ಜೆ.ಎಸ್ ಖೆಹರ್ ಮತ್ತು ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ನೀಡಿದ್ದು, ನಕಲಿ ಪ್ರಮಾಣ ಪತ್ರಗಳಿಗೆ ಕಾನೂನು ಕಣ್ಣಲ್ಲಿ ಯಾವುದೇ ಮಾನ್ಯತೆಯಿಲ್ಲ , ಅಂತವರು ತಮ್ಮ ಉದ್ಯೋಗ ಮತ್ತು ನೌಕರಿ ಕಳೆದುಕೊಳ್ಳುತ್ತಾರೆ ಎಂದು ಹೇಳಿದೆ.
ಉದ್ಯೋಗಕ್ಕೆ ಸೇರಿ, 20 ವರ್ಷಗಳು ಕೆಲಸ ಮಾಡಿದ ನಂತರ, ವ್ಯಕ್ತಿ ನೀಡಿರುವುದು ನಕಲಿ ಜಾತಿ ಪ್ರಮಾಣ ಪತ್ರ ಎಂದು ಸಾಬೀತಾದರೇ ಅಂಥವರು ಉದ್ಯೋಗದಲ್ಲಿ ಮುಂದುವರಿಯಬಹುದು ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಬದಿಗೊತ್ತಿರುವ ಸುಪ್ರೀಂ ಎತ್ತಿ ಹಿಡಿದಿದೆ.
ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಂತರ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.
ಈ ಹಿಂದೆ ಬೆಳಕಿಗೆ ಬಂದಿದ್ದ ಪ್ರಕರಣಗಳಿಗೆ ಸುಪ್ರೀಂಕೋರ್ಟ್ ನ ಈ ತೀರ್ಪು ಅನ್ವಯವಾಗುವುದಿಲ್ಲ, ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಅಥವಾ ಪದವಿ ಪಡೆದಿದ್ದಾರೆ ಎಂಬ ಮಾಹಿತಿ ಕೋರ್ಟ್ ನ ತೀರ್ಪಿನ ನಂತರ ಬಯಲಾದರೇ ಅಂಥಹ ಪ್ರಕರಣಗಳಿಗೆ ಸುಪ್ರೀಂ ಕೋರ್ಟ್ ನ ಈ ಆದೇಶ ಅನ್ವಯವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.