ನವದೆಹಲಿ: ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಬೀಳ್ಕೊಟ್ಟರು.ಈ ಸಂದರ್ಭದಲ್ಲಿ ಭೋಜನ ಕೂಟ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಮುಖರ್ಜಿಯವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.
ಸಂಪ್ರದಾಯದಂತೆ ಪ್ರಧಾನಿ ಮೋದಿಯವರು ನಿರ್ಗಮಿತ ರಾಷ್ಟ್ರಪತಿಗಳಿಗೆ ವಿದಾಯ ಆತಿಥ್ಯ ಕೂಟದಲ್ಲಿ ನೆನಪಿನ ಕಾಣಿಕೆಯನ್ನು ನೀಡಿದರು ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಟ್ವೀಟ್ ಮಾಡಿದೆ.
ಭೋಜನ ಕೂಟದಲ್ಲಿ ಚುನಾಯಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಹಿರಿಯ ಸಚಿವರುಗಳು ಮತ್ತು ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.
ಇಂದು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಎಲ್ಲಾ ಸಂಸದರು ನಿರ್ಗಮಿತ ರಾಷ್ಟ್ರಪತಿ ಮುಖರ್ಜಿಯವರಿಗೆ ವಿದಾಯ ಕೋರಲಿದ್ದಾರೆ.
ಮೊನ್ನೆ ಶುಕ್ರವಾರ ಸಶಸ್ತ್ರ ಪಡೆಗಳ ಸುಪ್ರೀಂ ಕಮ್ಯಾಂಡರ್ ಗೆ ಕೂಡ ವಿದಾಯ ಕೋರಲಾಯಿತು.
ದೆಹಲಿಯ ಮನೆಕ್ಷಾ ಕೇಂದ್ರದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಮಿಲಿಟರಿಯ ಹಿರಿಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು. ಸೇನಾ ಪಡೆ ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಿ ಶುಭ ಕೋರಿದರು. ಹುತಾತ್ಮ ಯೋಧರ ಕುಟುಂಬದವರೊಂದಿಗೆ ಕೂಡ ಮಾತುಕತೆ ನಡೆಸಿದರು.