ನಟೋರಿಯಸ್ ಉಗ್ರ ಅಬು ದುಜಾನಾ ಹತ್ಯೆ: ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನೆಗೆ ಮಹತ್ವದ ಯಶಸ್ಸು

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಗೆ ಮಂಗಳವಾರ ಮಹತ್ವದ ಯಶಸ್ಸು ದೊರೆತಿದ್ದು...
ಉಗ್ರ ಅಬು ದುಜಾನಾ (ಸಂಗ್ರಹ ಚಿತ್ರ)
ಉಗ್ರ ಅಬು ದುಜಾನಾ (ಸಂಗ್ರಹ ಚಿತ್ರ)

ಕಾಶ್ಮೀರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಗೆ ಮಂಗಳವಾರ ಮಹತ್ವದ ಯಶಸ್ಸು ದೊರೆತಿದ್ದು, ಹಲವು ವರ್ಷಗಳಿಂದ ಸೇನೆಗೆ ಚಳ್ಳೆ ಹಣ್ಣು ತಿನ್ನಿಸಿ ಯುವಕರನ್ನು ಉಗ್ರ  ಸಂಘಟನೆಗೆ ಸೆಳೆಯುತ್ತಿದ್ದ ಲಷ್ಕರ್ ಉಗ್ರ ಅಬು ದುಜಾನಾನನ್ನು ಗುಂಡಿಕ್ಕಿ ಹತ್ಯೆಗೈಯ್ಯಲಾಗಿದೆ.

ಕಾಶ್ಮೀರದ ಹಕ್ರೀಪೋರಾ ಗ್ರಾಮದಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನು ಸುತ್ತುವರೆದ ಸೇನೆ ಉಬ್ಬರೂ ಉಗ್ರರನ್ನು ಸೆದೆಬಡಿಯುವಲ್ಲಿ ಯಶಸ್ವಿಯಾಗಿದೆ. ಮೃತರಿಬ್ಬರ ಪೈಕಿ ಓರ್ವ ಲಷ್ಕರ್ ಉಗ್ರ ಆರಿಫ್ ಲಲಿಹಾರಿ ಮತ್ತು ಅಬು ದುಜಾನಾ  ಎಂದು ಗುರುತಿಸಲಾಗಿದೆ. ಈ ಪೈಕಿ ಅಬು ದುಜಾನ ಕಾಶ್ಮೀರದ ಲಷ್ಕರ್ ಸಂಘಟನೆಯ ಮುಖ್ಯಸ್ಥನಾಗಿದ್ದು, ಯುವಕರನ್ನು ಸಂಘಟನೆಗೆ ಸೇರಿಸಿಕೊಂಡು ಅವರಿಗೆ ಉಗ್ರ ತರಬೇತಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈತ ಎಷ್ಟರ  ಮಟ್ಟಿಗೆ ನಟೋರಿಯಸ್ ಎಂದರೆ ಈತನ ತಲೆಗೆ ಕಾಶ್ಮೀರ ಪೊಲೀಸರು ಬರೊಬ್ಬರಿ 15 ಲಕ್ಷ ಬಹುಮಾನ ಘೋಷಣೆ ಮಾಡಿದ್ದರಂತೆ.

ಮೂಲಗಳ ಪ್ರಕಾರ ಪುಲ್ವಾಮದಲ್ಲಿರುವ ತನ್ನ ಪತ್ನಿಯನ್ನು ನೋಡಿಕೊಂಡು ಹೋಗಲು ಅಬು ದುಜಾನ ಆಗಮಿಸಿದ್ದನಂತೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸೈನಿಕರು ಆತನನ್ನು ಸುತ್ತುವರೆದಿದ್ದಾರೆ. ಈ ವೇಳೆ ಏಕಾಏಕಿ  ಅಬುದುಜಾನಾ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಆತ ಹತನಾಗಿದ್ದಾನೆ. ಅಬು ದುಜಾನಾ ಹತ್ಯೆ ಭಾರತೀಯ ಸೇನೆ ಕಾಶ್ಮೀರದಲ್ಲಿ ನಡೆಸುತ್ತಿರುವ ಉಗ್ರ ನಿಗ್ರಹ ಕಾರ್ಯಾಚರಣೆಯ  ಮಹತ್ವದ ತಿರುವು ಎಂದೇ ವಿಶ್ಲೇಷಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಬು ದುಜಾನಾ ಮೋಸ್ಟ್ ವಾಂಟೆಡ್ ಉಗ್ರ ಎಂದು ಗುರುತಿಸಲಾಗಿದೆ. ಈತನನ್ನು ಜೀವಂತವಾಗಿ ಅಥವಾ ನಿರ್ಜೀವವಾಗಿ ಹಿಡಿದುಕೊಟ್ಟವರಿಗೆ 15 ಲಕ್ಷ  ಬಹುಮಾನ ನೀಡುವುದಾಗಿ ಕಾಶ್ಮೀರ ಪೊಲೀಸರು ಈ ಹಿಂದೆ ಘೋಷಣೆ ಮಾಡಿದ್ದರು.

2015ರಲ್ಲಿ ನಡೆದ ಉದಮ್ ಪುರ ದಾಳಿಯೂ ಸೇರಿದಂತೆ ಈ ವರೆಗೂ ಈತ ಸುಮಾರು 36ಕ್ಕೂ ಹೆಚ್ಚು ದಾಳಿಗಳಲ್ಲಿ ಪಾಲ್ಗೊಂಡಿದ್ದ ಎಂದು ಹೇಳಲಾಗಿದೆ. ಭಾರತೀಯ ಸೇನೆಯನ್ನು ಗುರಿಯಾಗಿಸಿ ಕೊಂಡು ಉಗ್ರರು ನಡೆಸಿದ  ಬಹುತೇಕ ದಾಳಿಗಳಲ್ಲಿ ಈತನ ಕೈವಾಡವಿತ್ತು ಎಂದು ಹೇಳಲಾಗಿದೆ. ಗಿಲ್ಗಿಟ್ ಮತ್ತು ಬಾಲ್ಟಿಸ್ತಾನದ ನಿವಾಸಿಯಾಗಿದ್ದ ದುಜಾನಾ 17 ವರ್ಷದವನಾಗಿದ್ದಾಗಲೇ ಎಲ್ ಇಟಿ ಉಗ್ರ ಸಂಘಟನೆ ಸೇರಿದ್ದ. ಬಳಿಕ ಪುಲ್ವಾಮಾದ  ಯುವತಿಯನ್ನು ವರಿಸಿದ್ದ. ಬಳಿಕ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದ ಎಂದು ತಿಳಿದುಬಂದಿದೆ.

2014ರಲ್ಲಿ ಸ್ಥಳೀಯ ಉಗ್ರನೋರ್ವನನ್ನು ಸೇನೆ ಕೊಂದು ಹಾಕಿದ್ದಾಗ ಮೊಟ್ಟ ಮೊದಲ ಬಾರಿಗೆ ದುಜಾನಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಪುಲ್ವಾಮಾದ ಕಾಕ್ಪೋರಾದಲ್ಲಿ ನಡೆದ ಉಗ್ರನ ಅಂತಿಮ ಸಂಸ್ಕಾರದ ವೇಳೆ ಈತ  ಭಾಗಿಯಾಗಿ ಅಂತ್ಯ ಸಂಸ್ಕಾರದ ಬಳಿಕ ಸೇನೆ ವಿರುದ್ಧ ಕಲ್ಲು ತೂರಾಟಕ್ಕೆ ಪ್ರಚೋದನೆ ನೀಡಿದ್ದ. ಬಳಿಕ 2016ರ ಜುಲೈನಲ್ಲಿ ಹಿಜ್ಬುಲ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಆತನ ಅಂತಿಮ ಸಂಸ್ಕಾರದ ವೇಳೆಯಲ್ಲಿ  ಎರಡನೇ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದ. ಬಳಿಕ ನಡೆದ ಸರಣಿ ಕಲ್ಲು ತೂರಾಟದ ವೇಳೆ ಈ ಸಕ್ರಿಯನಾಗಿದ್ದ ಎಂದು ಸೇನಾ ಮೂಲಗಳು ತಿಳಿಸಿವೆ. 2016ರವಗೊ ಕಾಶ್ಮೀರ ಎಲ್ ಇಟಿ ಸಂಘಟನೆಗೆ ಅಬು ಖಾಸಿಮ್  ನಾಯಕನಾಗಿದ್ದ. ಆದರೆ ಆತನ ಹತ್ಯೆ ಬಳಿಕ ಆ ಸ್ಥಾನಕ್ಕೆ ದುಜಾನಾ ನೇಮಕವಾಗಿದ್ದ. ನೇಮಕವಾದ ನಾಲ್ಕೇ ತಿಂಗಳಲ್ಲಿ ಕಾಶ್ಮೀರ, ಪುಲ್ವಾಮ ಸೇರಿದಂತೆ ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳನ್ನು ತನ್ನ ಹತೋಟಿಗೆ ತೆಗೆದುಕೊಂಡಿದ್ದ  ಎಂದು ತಿಳಿದುಬಂದಿದೆ.

ಹೀಗಾಗಿ ಈತನ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ಎಲ್ ಇಟಿ ಉಗ್ರ ಸಂಘಟನೆಗೆ ನಾಯಕನೇ ಇಲ್ಲದಂತಾಗಿದ್ದು, ಇದು ಸೇನೆಗೆ ಸಿಕ್ಕ ದೊಡ್ಡ ಯಶಸ್ಸು ಎಂದು ಬಣ್ಣಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com