ಪಾಟ್ನಾ: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಔತಣಕೂಟಕ್ಕೆ ಗೈರು ಹಾಜರಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಲ್ಲಿ ಭಿನ್ನಮತ ಎದುರಾಗಿರುವ ಲಕ್ಷಣಗಳು ಕಂಡಿವೆ.
ಜೂ.2 ರಂದು ಬಿಹಾರ ಸಿಎಂ ನಿತೀಶ್ ಕುಮಾರ್ ಕರೆದಿದ್ದ ಸಚಿವ ಸಂಪುಟ ಸಭೆಗೆ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್, ಶಿಕ್ಷಣ ಸಚಿವ ಅಶೋಕ್ ಚೌಧರಿ ಸೇರಿದಂತೆ ಹಲವು ಸಚಿವರು ಗೈರು ಹಾಜರಾಗಿದ್ದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಬದಲಾವಣೆ ತರುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ನಿತೀಶ್ ಕುಮಾರ್ ಸಚಿವ ಸಂಪುಟ ಸಭೆ ಕರೆದಿದ್ದರು. ಆದರೆ ಸಭೆಗೆ ಆರ್ ಜೆಡಿಯ ಪ್ರಮುಖ ಸಚಿವರು ಗೈರು ಹಾಜರಾಗಿರುವುದು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶ ರವಾನೆ ಮಾಡುವಂತಿದೆ.
ಕಳೆದ ಕೆಲವು ತಿಂಗಳುಗಳಿಂದಲೂ ಬಿಹಾರದ ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ವದಂತಿ ಹಬ್ಬಿತ್ತು. ಇದಕ್ಕೆ ಪೂರಕವಾಗಿ ಈಗ ಯಾದವ್ ಸಹೋದರರು ಸಭೆಗೆ ಗೈರಾಗಿದ್ದರೆ. ಆದರೆ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಬೇರೆಯದ್ದೇ ಕಥೆ ಹೇಳುತ್ತಿದ್ದು, ಎಲ್ಲವೂ ಸರಿ ಇದೆ ಎನ್ನುತ್ತಿದ್ದಾರೆ.