ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯತ್ನ ನಡೆಸಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ.
ಬೆಳಗಿನ ಜಾವ 4.10ರ ಸುಮಾರಿಗೆ ಸಿಆರ್'ಪಿಎಫ್ ಕ್ಯಾಂಪ್ ಬಳಿ ಬಂದಿರುವ ಉಗ್ರರು ದಾಳಿ ನಡೆಸಲು ಯತ್ನ ನಡೆಸಿದ್ದಾರೆ. ಈ ವೇಳೆ ಅಲರ್ಟ್ ಆದ ಸೇನಾ ಪಡೆ, ಉಗ್ರರ ಯತ್ನವನ್ನು ವಿಫಲಗೊಳಿಸಿ ದಾಳಿ ನಡೆಸಲು ಮುಂದಾಗಿದ್ದ ನಾಲ್ವರು ಉಗ್ರರನ್ನು ಎನ್ ಕೌಂಟರ್ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.
ಬಂಡಿಪೋರಾದ ಸುಂಬಲ್ 45 ಬೆಟಾಲಿಯನ್ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಉಗ್ರರ ಗುಂಪೊಂದು ದಾಳಿ ನಡೆಸಲು ಮುಂದಾಗಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಸೇನಾ ಪಡೆ ಉಗ್ರರ ಆತ್ಮಾಹುತಿ ದಾಳಿಯನ್ನು ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ನಾಲ್ಕು ಉಗ್ರರ ಶವಗಳು ಪತ್ತೆಯಾಗಿದೆ. ಅಲ್ಲದೆ, ಎಕೆ 47 ರೈಫಲ್ಸ್ ಗಳು, 1 ಯುಬಿಜಿಎಲ್ ಮತ್ತು ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.