ಲಖನೌ: ಉತ್ತರ ಪ್ರದೇಶದಲ್ಲಿ ಗೋಹತ್ಯೆ, ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ ಎಸ್ ಎ) ಮತ್ತು ಗೂಂಡಾ ಕಾಯ್ದೆಯಡಿ ಶಿಕ್ಷೆಗೆ ಅರ್ಹವಾಗಲಿದೆ ಎಂದು ಮಂಗಳವಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗೋಹತ್ಯೆಯಲ್ಲಿ ಭಾಗಿಯಾಗುವ ಜನ ಮತ್ತು ಗುಂಪುಗಳ ವಿರುದ್ಧ ಶಿಸ್ತಾಗಿ ವರ್ತಿಸಲು ಎಲ್ಲ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಸುಲಖನ್ ಸಿಂಗ್ ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಆದಾಗಿಲಿಂದಲೂ, ಗೋಹತ್ಯೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಾನೂನು ಸಂಸ್ಥೆಗಳಿಗೆ ಮನದಟ್ಟು ಮಾಡುತ್ತಲೇ ಬಂದಿದ್ದಾರೆ.
ಎಲ್ಲ ಕಡೆ ಪೊಲೀಸ್ ಗಸ್ತು ಹೆಚ್ಚಿಸಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆಯೂ, ಕೋರ್ಟ್ ಗಳ ಮೂಲಕ ಅಪರಾಧಿಗಳ ಜಾಮೀನುಗಳನ್ನು ವಜಾ ಮಾಡಲು ಕೆಲಸ ಮಾಡುವಂತೆಯೂ ಇನ್ಸ್ಪೆಕ್ಟರ್ ಜನರಲ್ ಗಳು ಮತ್ತು ಉಪ ಇನ್ಸ್ಪೆಕ್ಟರ್ ಜನರಲ್ ಗಳಿಗೆ ಸುಲಖನ್ ಸಿಂಗ್ ಕರೆ ಕೊಟ್ಟಿದ್ದಾರೆ.
ಚುಡಾಯಿಸುವುದನ್ನು ಮತ್ತು ಜೇಬುಗಳ್ಳರನ್ನು ಹತ್ತಿಕ್ಕಲು ಮಾಲ್ ಗಳು, ಶಾಪಿಂಗ್ ಕಾಂಪ್ಲೆಕ್ಸ್ ಗಳು ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಪೊಲಿರನ್ನು ನಿಯೋಜಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.
ಕಾರ್ ಗಳ ಮೇಲೆ ಗೂಟದ ಬತ್ತಿಯನ್ನು ಬಳಸುವವರು, ಕಾರಿನ ಗಾಜಿಗೆ ಕಪ್ಪು ಬಣ್ಣದ ಸ್ಟಿಕ್ಕರ್ ಅಂಟಿಸಿರುವವರು ಮತ್ತು ವಾಹನಗಳ ಮೇಲೆ ರಾಜಕೀಯ ಪಕ್ಷಗಳ ಬಾವುಟಗಳನ್ನು ಹಚ್ಚಿ ಓಡಾಡುವವರ ವಿದುದ್ಧ ಕಾರ್ಯಾಚರಣೆ ನಡೆಸುವುದಾಗಿಯೂ ಪೊಲೀಸ್ ಮುಖ್ಯಸ್ಥ ಎಚ್ಚರಿಸಿದ್ದಾರೆ.