ದಾನೀಶ್ ಡೆಹ್ರಾಡೂನ್ ನಲ್ಲಿರುವ ಅಗ್ರಿಕಲ್ಚರ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿ ಮಾಡುತ್ತಿದ್ದಾನೆ. ಹಂದ್ವಾರದಲ್ಲಿ 2016ರಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣದಲ್ಲಿ ದಾನೀಶ್ ಭಾಗಿಯಾಗಿದ್ದ. ಘಟನೆ ಬಳಿಕ ದಾನೀಶ್ ನನ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ದಾನೀಶ್ ಇನ್ನೂ ಯುವಕನಾಗಿದ್ದರಿಂದ ಆತನಿಗೆ ಕೌನ್ಸಿಲಿಂಗ್ ನಡೆಸಿ ಬಿಡುಗಡೆ ಮಾಡಿದ್ದರು.
ಇದಾದ ಬಳಿಕ ದಾನೀಶ್ ಮೇಲೆ ಅಧಿಕಾರಿಗಳು ಒಂದು ಕಣ್ಣಿಟ್ಟಿದ್ದರು. ದಾನೀಶ್ ಉಗ್ರ ಸಂಘಟನೆಯೊಂದಿಗೆ ಕೈಜೋಡಿಸಿದ್ದಾನೆಂಬ ವಿಚಾರ ತಿಳಿಯುತ್ತಿದ್ದಂತೆಯೇ ಹಂದ್ವಾರ ಪೊಲೀಸರು ಹಾಗೂ 21 ಆರ್'ಆರ್ ಸೇನಾ ಪಡೆ ಆತನ ಪೋಷಕರನ್ನು ಸಂಪರ್ಕಿಸಿದೆ. ಇದರಂತೆ ಮತ್ತೆ ದಾನೀಶ್ ಗೆ ಕೌನ್ಸಿಲಿಂಗ್ ನಡೆಸಿ ಶರಣಾಗುವಂತೆ ತಿಳಿಸಿದೆ.
ದಾನೀಶ್ ಶರಣಾಗಿದ್ದೇ ಆದರೆ, ಕಾನೂನು ರೀತಿಯಲ್ಲಿ ವ್ಯವಹರಿಸಲಾಗುತ್ತದೆ ಎಂದು ಅಧಿಕಾರಿಗಳು ಪೋಷಕರಿಗೆ ಭರವಸೆ ನೀಡಿದ್ದಾರೆ. ಇದರಂತೆ ಕೊನೆಗೂ ದಾನೀಶ್ ಮನವೊಲಿಸಿರುವ ಪೋಷಕರು ಭದ್ರತಾ ಸಿಬ್ಬಂದಿಗಳ ಬಳಿ ಶರಣಾಗುವಂತೆ ಮಾಡಿದ್ದಾರೆ.
ವಿಚಾರಣೆ ವೇಳೆ ದಾನೀಶ್ ಕೆಲ ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾನೆಂದು ಮೂಲಗಳು ತಿಳಿಸಿವೆ. ದಕ್ಷಿಣ ಕಾಶ್ಮೀರದಲ್ಲಿರುವ ಉಗ್ರರೊಂದಿಗೆ ತಾನು ಸಂಪರ್ಕದಲ್ಲಿದ್ದು, ಉಗ್ರನಾಗಲು ನಿರ್ಧಾರ ಕೈಗೊಂಡಿದ್ದೆ ಎಂದು ಹೇಳಿಕೊಂಡಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಗಳು ದಾನೀಶ್ ಗೆ ಕೆಲ ಜವಾಬ್ದಾರಿಗಳನ್ನು ನೀಡಿದ್ದು, ಉತ್ತರ ಕಾಶ್ಮೀರದಲ್ಲಿರುವ ಸ್ಥಳೀಯ ಯುವಕರನ್ನು ಸಂಘಟಿಸುವಂತೆ ತಿಳಿಸಿದ್ದಾರೆ. ಇದಲ್ಲದೆ, ಉಗ್ರರೊಂದಿಗೆ ದಾನೀಶ್ ಕೆಲ ದಿನಗಳನ್ನು ಕಳೆದಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.