ತಿರುಪತಿ: ನೋಟು ನಿಷೇಧ ಬಳಿಕ ವಿಶ್ವದ ಶ್ರೀಮಂತ ದೇವರು ಎಂಬ ಖ್ಯಾತಿ ಗಳಿಸಿರುವ ತಿರುಪತಿ ತಿರುಮಲ ದೇವಾಲಯಕ್ಕೆ ಭಾರಿ ಪ್ರಮಾಣದ ಹಳೆಯ ನೋಟುಗಳು ಹರಿದುಬರುತ್ತಿದ್ದು, ಈ ನೋಟುಗಳೇ ಇದೀಗ ದೇವಾಲಯದ ಆಡಳಿತ ಮಂಡಳಿಗೆ ತಲೆನೋವು ತಂದಿತ್ತಿದೆ.
ಹಳೆಯ ನೋಟುಗಳನ್ನು ಬದಲಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡಿದ್ದ ಡೆಡ್ ಲೈನ್ ಒಳಗೆ ಹಣವನ್ನು ಬದಲಾಯಿಸಿಕೊಳ್ಳಲಾಗದ ಮತ್ತು ಅದನ್ನು ಬ್ಯಾಂಕುಗಳಿಗೆ ಜಮೆ ಮಾಡಲಾಗದವರು ಆ ಹಣವನ್ನೆಲ್ಲಾ ತಂದು ತಿರುಪತಿ ಹುಂಡಿಗೆ ಹಾಕುತ್ತಿದ್ದಾರೆ. ಇನ್ನೂ ಆರ್ ಬಿಐನ ನೂತನ ನಿಯಮಗಳ ಪ್ರಕಾರ ನಿಷೇಧಿತ ಹಳೆಯ 500 ಮತ್ತು 1000 ರುಗಳ ನೋಟುಗಳು ಹತ್ತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿದ್ದರೆ ಅದನ್ನು ಶಿಕ್ಷಾರ್ಹ ಅಪರಾಧವಾಗಿದ್ದು, ಈ ತಪ್ಪಿಗೆ ಕನಿಷ್ಠ 10 ಸಾವಿರ ರು.ದಂಡ ವಿಧಿಸಲಾಗುತ್ತಿದೆ. ಹೀಗಾಗಿ ಇದೀಗ ಟಿಟಿಡಿ ಅಡಕತ್ತರಿಗೆ ಸಿಲುಕಿದ್ದು, ಹುಂಡಿಗೆ ಬರುತ್ತಿರುವ ಅಪಾರ ಪ್ರಮಾಣದ ಹಳೆಯ ನೋಟುಗಳನ್ನು ಏನು ಮಾಡಬೇಕು ಎಂಬ ಗೊಂದಲದಲ್ಲಿ ಸಿಲುಕಿದೆ.
ಇದೇ ಕಾರಣಕ್ಕೆ ಟಿಟಿಡಿ ಆಡಳಿತಾಧಿಕಾರಿಗಳು ಕೇಂದ್ರ ಸರ್ಕಾರ ಹಾಗೂ ಆರ್ ಬಿಐಗೆ ಪತ್ರಬರೆದಿದ್ದು, ಹುಂಡಿಗೆ ಬಿದ್ದಿರುವ ಹಳೆಯ ನೋಟುಗಳನ್ನು ಬದಲಿಸಿಕೊಡಲು ಸಾಧ್ಯವೇ ಎಂದು ಕೇಳಿದೆ. ಅಂತೆಯೇ ಸರ್ಕಾರ ಹಾಗೂ ಆರ್ ಬಿಐನಿಂದ ಉತ್ತರಕ್ಕಾಗಿ ನಿರೀಕ್ಷಿಸುತ್ತಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಟಿಟಿಡಿಯ ಕಾರ್ಯಕಾರಿ ಅಧಿಕಾರಿ ಡಿ ಸಾಂಬಶಿವರಾವ್ ಅವರು, ಕಳೆದ 2 ತಿಂಗಳುಗಳಲ್ಲಿ ದೇವಾಲಯದ ಹುಂಡಿಗೆ ಸುಮಾರು 4 ಕೋಟಿ ಮೌಲ್ಯದ ಹಳೆಯ ನೋಟುಗಳು ಭಕ್ತರಿಂದ ಕಾಣಿಕೆಯಾಗಿ ಬಂದಿದೆ. ಆದರೆ ಪ್ರಸ್ತುತ ಈ ನೋಟುಗಳ ಚಲಾವಣೆ ಇಲ್ಲದಿರುವುದರಿಂದ ಈ ನೋಟುಗಳ ವಿನಿಮಯ ಹೇಗೆ ಎಂಬುದರ ಕುರಿತು ಕೇಂದ್ರ ಸರ್ಕಾರ ಹಾಗೂ ಆರ್ ಬಿಐಗೆ ಪತ್ರ ಬರೆದು ಕೇಳಲಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಕೂಡ ಇದೇ ರೀತಿ ಅಂದರೆ ನೋಟು ನಿಷೇಧ ಘೋಷಣೆಯಾದ ಬಳಿಕ ತಿರುಪತಿಗೆ ಅಪಾರ ಪ್ರಮಾಣದ ಹಳೆಯ ನೋಟುಗಳು ಹರಿದುಬಂದಿದ್ದವು.
Advertisement