ಲಖನೌ: ಅಸ್ಪೃಶ್ಯತೆ ಸಾಮಾಜಿಕ ಪಿಡುಗು ಎಂದು ಇಡೀ ದೇಶ ಬೊಬ್ಬೆ ಹೊಡೆಯುತ್ತಿದ್ದರೆ ಅತ್ತ ಉತ್ತರ ಪ್ರದೇಶದ ಜನಪ್ರತಿನಿಧಿಯೊಬ್ಬರು ಅದೇ ಅಸ್ಪೃಶ್ಯತೆ ಮನಸಾರೆ ಒಪ್ಪಿ ಆಚರಿಸುತ್ತಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 6 ದಶಕಗಳೇ ಕಳೆದು ಹೋದರು ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಹೇಗೆ ಜೀವಂತವಾಗಿದೆ ಎಂಬುದಕ್ಕೆ ಉತ್ತರ ಪ್ರದೇಶ ಶಾಸಕ ರಾಜ್ ವೀರ್ ದಿಲೇರ್ ಅವರ ನಿದರ್ಶನ. ಕೆಳವರ್ಗಕ್ಕೆ ಸೇರಿದ ರಾಜ್ ವೀರ್ ದಿಲೇರ್ ಉತ್ತರ ಪ್ರದೇಶದ ಶಾಸಕರಾಗಿದ್ದು, ಇಂದಿಗೂ ಅವರು ಮೇಲ್ವರ್ಗದವರ ಮನೆಗೆ ತೆರಳಿದರೆ ಅವರಿಗೆ ಸರಿಸಾನವಾಗಿ ಕೂರುವುದಿಲ್ಲ. ನೆಲದ ಮೇಲೆಯೇ ಕುಳಿತು ಸಮಸ್ಯೆ ಆಲಿಸುತ್ತಾರೆ. ಅಂತೆಯೇ ಅವರು ಸದಾ ತಮ್ಮೊಂದಿಗೆ ಒಂದು ಪ್ರತ್ಯೇಕ ಲೋಟ ಒಯ್ದು ಅದರಲ್ಲೇ ಚಹಾ ಸೇವನೆ ಮಾಡುತ್ತಾರೆ.
ಇನ್ನು ರಾಜ್ ವೀರ್ ದಿಲೇರ್ ಅವರು ರಾಜಕೀಯಕ್ಕೆ ಹೊಸಬರೇನೂ ಅಲ್ಲ. ಅವರ ತಂದೆ ಕಿಶನ್ ಲಾಲ್ ಅವರೂ ಕೂಡ ಐದು ಬಾರಿ ಶಾಸಕರಾಗಿದ್ದವರು. ಅವರೂ ಕೂಡ ಜನಪ್ರತಿನಿಧಿಯಾಗಿದ್ದ ಸಂದರ್ಭದಲ್ಲಿ ಮೇಲ್ವರ್ಗದವರನ್ನು ಗೌರವಿಸುತ್ತಿದ್ದರಂತೆ. ಅವರ ಹಾದಿಯನ್ನೇ ರಾಜ್ ವೀರ್ ದಿಲೇರ್ ಅವರೂ ಕೂಡ ಪಾಲಿಸುತ್ತಿದ್ದಾರೆ.
ಇಂತಹ ರಾಜ್ ವೀರ್ ಉತ್ತರ ಪ್ರದೇಶ ಚುನಾವಣೆಯಲ್ಲಿ ಜಾಟ್ ಸಮುದಾಯದ ಪ್ರಾಬಲ್ಯವಿರುವ ಅಲಿಘಡ ಜಿಲ್ಲೆಯ ಇಗ್ಲಸ್ ಕ್ಷೇತ್ರದಿಂದ ಸ್ಪರ್ಧಿಸಿ ತಮ್ಮ ಪ್ರತಿಸ್ಪರ್ಧಿ ಬಿಎಸ್ ಪಿಯ ರಾಜೇಂದ್ರ ಕುಮಾರ್ ಅವರ ವಿರುದ್ಧ ಸುಮಾರು 75 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.
Advertisement