ನವದೆಹಲಿ: ಚುನಾವಣಾ ಆಯೋಗ ಮತ್ತು ಯೂನಿಯನ್ ಆಫ್ ಇಂಡಿಯಾಗೆ ಬುಧವಾರ ನೊಟೀಸ್ ಜಾರಿ ಮಾಡಿದ ಸುಪ್ರೀಂ ಕೋರ್ಟ್, ಸಂಸದರಿಗೆ ಅರ್ಹತೆಯಿರುವ ಪಿಂಚಣಿ ಮತ್ತು ಭತ್ಯೆಗಳಿಗೆ ಕಾಯಿದೆ ತರಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಗೆ ಉತ್ತರಿಸುವಂತೆ ಸೂಚಿಸಿದೆ.
ಸುಪ್ರೀಂ ಕೋರ್ಟ್ ಇದರ ಜೊತೆಗೆ ಲೋಕಸಭೆ ಮತ್ತು ರಾಜ್ಯಸಭೆಗಳ ಮಹಾ ಕಾರ್ಯದರ್ಶಿಗೆ ಕೂಡ ನೊಟೀಸ್ ಜಾರಿ ಮಾಡಿ ನಾಲ್ಕು ವಾರಗಳೊಳಗೆ ಉತ್ತರಿಸುವಂತೆ ಹೇಳಿದೆ.
ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್ ಮತ್ತು ಎಸ್. ಅಬ್ದುಲ್ ನಾಸೀರ್ ಅವರನ್ನೊಳಗೊಂಡ ನ್ಯಾಯಪೀಠ, ಉತ್ತರ ಪ್ರದೇಶ ಮೂಲದ ಸರ್ಕಾರೇತರ ಸಂಘಟನೆ ಲೋಕ್ ಪ್ರಹರಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದೂರಿನ ಬಗ್ಗೆ ಆಲಿಸಿತು.
ವಿಷಯದ ಗಂಭೀರತೆ ಅರ್ಥವಾಗುತ್ತಿದ್ದು ಅದನ್ನು ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಸಂಸದರು ಪಡೆಯುತ್ತಿರುವ ಭತ್ಯೆಗಳ ಬಗ್ಗೆ ಯಾವುದೇ ಮಾರ್ಗಸೂಚಿಗಳಿಲ್ಲ ಎಂದು ಅರ್ಜಿದಾರರು ವಾದ ಮಾಡಿದ್ದಾರೆ. ಒಬ್ಬ ವ್ಯಕ್ತಿ 25-26ನೇ ವಯಸ್ಸಿನಲ್ಲಿ ಸಂಸದನಾದರೆ ಮುಂದೆ ಸಂಸದನಾಗದಿದ್ದರೂ ಆತ ತನ್ನ ಜೀವಿತಾವಧಿಯುದ್ದಕ್ಕೂ ಪಿಂಚಣಿ ಪಡೆಯಲು ಅರ್ಹನಾಗಿರುತ್ತಾನೆ ಎಂದು ಅರ್ಜಿದಾರರ ಪರ ವಕೀಲೆ ಕಾಮಿನಿ ಜೈಸ್ವಾಲ್ ನ್ಯಾಯಾಲಯದಲ್ಲಿ ವಾದಿಸಿದರು.