ಹತ್ರಾಸ್(ಉ.ಪ್ರ): ಇಲ್ಲಿನ ಮನ್ಯವರ್ ಕಾನ್ಷಿರಾಮ್ ಕಾಲೊನಿಯಲ್ಲಿ ಕಳೆದ ರಾತ್ರಿ ಮಾಂಸ ಮತ್ತು ಮೀನು ಮಾರಾಟ ಮಾಡುತ್ತಿದ್ದ ಮೂರು ಅಂಗಡಿಗಳನ್ನು ಅಪರಿಚಿತ ವ್ಯಕ್ತಿಗಳು ಬೆಂಕಿಯಿಟ್ಟು ಸುಟ್ಟು ಹಾಕಿದ್ದು ಸುತ್ತಮುತ್ತಲಿನ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಉಂಟುಮಾಡಿದೆ.
ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಕೆಲವು ಮಾಂಸದಂಗಡಿಗಳನ್ನು ಮುಚ್ಚಿರುವ ಬೆನ್ನಲ್ಲೇ ಈ ಪ್ರಕರಣ ನಡೆದಿದೆ. ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿವೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಹತ್ರಾಸ್ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.
ಈ ಭಾಗದ ವಿಭಾಗೀಯ ಜಿಲ್ಲಾಧಿಕಾರಿ ರಾಕೇಶ್ ಗುಪ್ತಾ ಮಾಂಸದಂಗಡಿ ಮಾಲೀಕರನ್ನು ಭೇಟಿ ಮಾಡಿದ್ದು ಅವರ ದೂರು-ದುಮ್ಮಾನಗಳನ್ನು ಆಲಿಸಿದರು.
ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಅಕ್ರಮ ಮಾಂಸದಂಗಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಅಲ್ಲದೆ ಅಧಿಕಾರಕ್ಕೆ ಬಂದರೆ ಯಾಂತ್ರೀಕೃತ ಕಸಾಯಿಖಾನೆಗಳನ್ನು ಮುಚ್ಚಿಸುವುದಾಗಿಯೂ ಹೇಳಿತ್ತು.
ನಿನ್ನೆ ಕಮಲ್ಗಡಹ ಪ್ರದೇಶದಲ್ಲಿ ಅಕ್ರಮ ಕಸಾಯಿಖಾನೆಯೊಂದನ್ನು ಜಿಲ್ಲಾಡಳಿತ ಮುಚ್ಚಿಸಿತ್ತು. ನಿನ್ನೆ ಗಜಿಯಾಬಾದ್ ಪೊಲೀಸರು 10 ಮಾಂಸದಂಗಡಿಗಳನ್ನು ಮತ್ತು ನಾಲ್ಕು ಕಸಾಯಿಖಾನೆಗಳಿಗೆ ಬೀಗ ಜಡಿದಿದೆ.