ಚೆನ್ನೈ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಎಐಎಡಿಎಂಕೆ ಪಕ್ಷದ ಚಿನ್ಹೆಯನ್ನು ಹಿಂದಕ್ಕೆ ಪಡೆದಿದ್ದು, ಉಪ ಚುನಾವಣೆಗಾಗಿ ಶಶಿಕಲಾ ಬಣಕ್ಕೆ ಟೋಪಿ ಮತ್ತು ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬದ ಚಿನ್ಹೆಯನ್ನು ಗುರುತಾಗಿ ನೀಡಿದೆ.
ಎಐಎಡಿಎಕೆ ಪಕ್ಷದ ಚಿನ್ಹೆಯಾಗಿದ್ದ ಎರಡು ಎಲೆಗಳ ಗುರುತಿಗಾಗಿ ಒ ಪನ್ನೀರ್ ಸೆಲ್ವಂ ಬಣ ಹಾಗೂ ವಿಕೆ ಶಶಿಕಲಾ ಬಣಗಳು ಪಟ್ಟು ಹಿಡಿದಿದ್ದರಿಂದ ಪಕ್ಷದ ಚಿನ್ಹೆಯನ್ನೇ ಚುನಾವಣಾ ಆಯೋಗ ನಿನ್ನೆ ರಾತ್ರಿ ಸ್ಥಗಿತಗೊಳಿಸಿದೆ. ಅಂತೆಯೇ ಉಪ ಚುನಾವಣೆ ನಿಮಿತ್ತ ಉಭಯ ಬಣಗಳಿಗೂ ಚಿನ್ಹೆಯ ಅವಕಾಶ ನೀಡಿತ್ತು. ಈ ಪೈಕಿ ಶಶಿಕಲಾ ಬಣ ತಮ್ಮ ಚಿನ್ಹೆಯಾಗಿ ಆಟೋ ರಿಕ್ಷಾ, ಕ್ರಿಕೆಟ್ ಬ್ಯಾಟ್ ಮತ್ತು ಟೋಪಿಯನ್ನು ಚಿನ್ಹೆಯಾಗಿ ನೀಡುವಂತೆ ಕೇಳಿತ್ತು. ಇದೀಗ ಶಶಿಕಾಲ ಬಣಕ್ಕೆ ಚುನಾವಣಾ ಆಯೋಗ ಟೋಪಿಯನ್ನು ಚಿನ್ಹೆಯಾಗಿ ನೀಡಿದೆ. ಅಂತೆಯೇ ಪನ್ನೀರ್ ಸೆಲ್ವಂ ಬಣಕ್ಕೆ ವಿದ್ಯುತ್ ಕಂಬವನ್ನು ಚಿನ್ಹೆಯಾಗಿ ನೀಡಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಳಿಕ ಒಡೆದು ಹೋಗಿರುವ ಎಐಎಡಿಎಂಕೆ ಪಕ್ಷ ಎರಡು ಬಣಗಳಾಗಿ ಮಾರ್ಪಟ್ಟಿದ್ದು, ಮಾಜಿ ಸಿಎಂ ಪನ್ನೀರ್ ಸೆಲ್ವಂ ಬಣ ತಮ್ಮ ಬಣಕ್ಕೆ ಎಐಎಡಿಎಂಕೆ ಪುರುಚ್ಚಿ ತಲೈವಿ ಅಮ್ಮಾ ಎಂದು ಹೆಸರಿಟ್ಟುಕೊಂಡಿದ್ದರೆ, ಜಯಾ ಆಪ್ತೆ ಶಶಿಕಲಾ ಬಣ ತಮ್ಮ ಬಣಕ್ಕೆ ಎಐಎಡಿಎಂಕೆ ಅಮ್ಮಾ ಎಂದು ಹೆಸರಿಟ್ಟುಕೊಂಡಿದ್ದಾರೆ.
Advertisement