

ಮುಂಬೈ: ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಿಂದ ಥಳಿಸಿದ ಸಂಸದ ರವೀಂದ್ರ ಗಾಯಕ್ವಡ್ ಅವರ ಬೆನ್ನೆಗೆ ಪರೋಕ್ಷವಾಗಿ ಶಿವಸೇನೆ ನಿಂತಿದ್ದು, ಅಗತ್ಯ ಬಿದ್ದರೆ ಖಂಡಿತ ಕೈ ಎತ್ತುತ್ತೇವೆ ಎಂದು ಪಕ್ಷ ಹೇಳಿದೆ.
ವಿವಾದದ ಸಂಬಂಧ ಮಾತನಾಡಿದ ಶಿವಸೇನೆ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಅವರು, ರವೀಂದ್ರ ಗಾಯಕ್ವಾಡ್ ಅವರು ಥಳಿಸಿದ್ದನ್ನು ಶಿವಸೇನೆ ಖಂಡಿತಾ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಯಾವ ಕಾರಣಕ್ಕಾಗಿ ಸಂಸದರು ಆ ರೀತಿ ವರ್ತಿಸಿದರು ಎಂಬುದು ತಿಳಿಯಬೇಕು. ತಪ್ಪಿತಸ್ಥರು ಯಾರೇ ಆದರೂ ಖಂಡಿತಾ ಶಿಕ್ಷೆಯಾಗಬೇಕು ಎಂದು ಹೇಳಿದರು.
ಅನ್ಯರನ್ನು ಥಳಿಸುವ ಸಂಸ್ಕೃತಿ ಶಿವಸೇನೆಯದ್ದಲ್ಲ. ಆದರೆ ಅಗತ್ಯ ಬಿದ್ದರೆ ಮತ್ತು ಅನಿವಾರ್ಯವಾದರೆ ಖಂಡಿತಾ ಕೈ ಎತ್ತುತ್ತೇವೆ. ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿರುವುದು ಅಸಂವಿಧಾನಿಕ. ಈ ಬಗ್ಗೆಯೂ ವಿಚಾರಣೆ ನಡೆಯಬೇಕು. ಒಂದು ವೇಳೆ ಸಾರ್ವಜನಿಕರೇ ಏರ್ ಇಂಡಿಯಾವನ್ನು ನಿಷೇಧಿಸಿದರೆ ಆಗ ಏನಾಗುತ್ತದೆ..? ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತುರ್ತಾಗಿ ತನ್ನ ಸೇವೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕು ಮತ್ತು ಉತ್ತಮ ಸೇವೆ ಒದಗಿಸಬೇಕು ಎಂದು ರಾವತ್ ಹೇಳಿದರು.
ಈ ನಡುವೆ ಏರ್ ಇಂಡಿಯಾ ಸಿಬ್ಬಂದಿಯನ್ನು ಥಳಿಸಿದ ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ಶಿವಸೇನೆ ಪಕ್ಷ ಸಮನ್ಸ್ ಜಾರಿ ಮಾಡಿದ್ದು, ಘಟನೆ ಸಂಬಂಧ ವಿವರ ನೀಡುವಂತೆ ಕೇಳಿದೆ. ಏತನ್ಮಧ್ಯೆ ಎಲ್ಲ ವಿಮಾನಗಳಲ್ಲೂ ರವೀಂದ್ರ ಗಾಯಕ್ವಾಡ್ ಅವರನ್ನು ನಿಷೇಧಿಸಿದ ಪರಿಣಾಮ ಸಂಸದ ರವೀಂದ್ರ ಗಾಯಕ್ವಾಡ್ ಅನ್ಯ ಮಾರ್ಗವಿಲ್ಲದೇ ರೈಲಿನಲ್ಲಿ ಪ್ರಯಾಣಿಸುವ ಸ್ಥಿತಿ ಬಂದೊದಗಿದೆ. ನಿನ್ನೆ ಫೆಡರೇಷನ್ ಆಫ್ ಇಂಡಿಯನ್ ಏರ್ ಲೈನ್ಸ್ ಸಂಸ್ಥೆ ರವೀಂದ್ರ ಗಾಯಕ್ವಾಡ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಿತ್ತು.