ಆ್ಯಂಬುಲೆನ್ಸ್ ನೀಡದ ಸರ್ಕಾರಿ ಆಸ್ಪತ್ರೆ: ಹೆಗಲ ಮೇಲೆ ಮಗನ ಶವ ಹೊತ್ತು ಸಾಗಿದ ತಂದೆ!

ಸತ್ತ ಮಗನ ಹೆಣ ಸಾಗಿಸಲು ಆ್ಯಂಬುಲೆನ್ಸ್ ಇಲ್ಲದೇ ತಂದೆ ತನ್ನ ಹೆಗಲ ಮೇಲೆಯೇ ಪುತ್ರನ ಶವ ಸಾಗಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಇಟಾವದಲ್ಲಿ ನಡೆದಿದೆ.
ಪುತ್ರನ ಶವ ಹೊತ್ತು ಸಾಗುತ್ತಿರುವ ವ್ಯಕ್ತಿ
ಪುತ್ರನ ಶವ ಹೊತ್ತು ಸಾಗುತ್ತಿರುವ ವ್ಯಕ್ತಿ

ಇಟಾವ: ಸತ್ತ ಮಗನ ಹೆಣ ಸಾಗಿಸಲು ಆ್ಯಂಬುಲೆನ್ಸ್ ಇಲ್ಲದೇ ತಂದೆ ತನ್ನ ಹೆಗಲ ಮೇಲೆಯೇ ಪುತ್ರನ ಶವ ಸಾಗಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಇಟಾವದಲ್ಲಿ ನಡೆದಿದೆ.

ಮೂಲಗಳ ಪ್ರಕಾರ ಉದಯ್ ವೀರ್ ಎಂಬ 45 ವರ್ಷದ ವ್ಯಕ್ತಿ ತನ್ನ ಮಗನ ಕಾಲಿನಲ್ಲಿ ನೋವು ಕಾಣಿಸುತ್ತಿದೆ ಎಂದು ಇಟಾವಾದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ತನ್ನ 15 ವರ್ಷದ ಪುಷ್ಪೇಂದ್ರ ಎಂಬ ಬಾಲಕನನ್ನು ದಾಖಲಿಸಿದ್ದರು.  ಆದರೆ ಇತ್ತೀಚೆಗೆ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ವೇಳೆ ಪುತ್ರನ ಹೆಣವನ್ನು ತನ್ನ ಗ್ರಾಮಕ್ಕೆ ಸಾಗಿಸಲು ತಂದೆ ಉದಯ್ ವೀರ್ ಆ್ಯಂಬುಲೆನ್ಸ್ ಕೇಳಿದ್ದಾರೆ. ಇದಕ್ಕೆ ನಕಾರಾ ವ್ಯಕ್ತಪಡಿಸಿದ ಆಸ್ಪತ್ರೆ ಸಿಬ್ಬಂದಿ  ಆ್ಯಂಬುಲೆನ್ಸ್ ಸೇವೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದರಿಂದ ನೊಂದ ತಂದೆ ತನ್ನ ಹೆಗಲ ಮೇಲೆಯೇ ತನ್ನ ಮಗನ ಶವವನ್ನು ಹೇರಿಕೊಂಡು ಸಾಗಿದ್ದಾನೆ. ಇದನ್ನು ಕಂಡ ಕೆಲ ಸ್ಥಳೀಯರು ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಇದು ಇದೀಗ  ವ್ಯಾಪಕ ವೈರಲ್ ಆಗಿದೆ. ಈ ಬಗ್ಗೆ ತಂದೆ ಉದಯ್ ವೀರ್ ಅವರಲ್ಲಿ ವಿಚಾರಿಸಿದಾಗ ಆಸ್ಪತ್ರೆ ಸಿಬ್ಬಂದಿ ತನ್ನ ಮಗನಿಗೆ ಸರಿಯಾದ ಚಿಕಿತ್ಸೆ ನೀಡಿದ್ದರೆ ಬಹುಶಃ ನನ್ನ ಮಗ ಬದುಕುಳಿದಿರುತ್ತಿದ್ದ. ಆದರೆ ಆತ ಸತ್ತುಹೋದ. ಕನಿಷ್ಠ ಪಕ್ಷ  ಹೆಣ ಸಾಗಿಸಲು ಆ್ಯಂಬುಲೆನ್ಸ್ ಕೇಳಿದರೆ ಅದಕ್ಕೂ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದೇ ನಾನೇ ನನ್ನ ಹೆಗಲ ಮೇಲೆ ಹೆಣ ಹೊತ್ತು ಸಾಗಿದ್ದೇನೆ ಎಂದು ನೊಂದು ಹೇಳಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಉತ್ತರ ಪ್ರದೇಶ ಸರ್ಕಾರ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದು, ಇಟಾವಾ ವೈದ್ಯಕೀಯ ಅಧಿಕಾರಿ ಡಾ.ರಾಜೀವ್ ಯಾದವ್ ಅವರು ಆಸ್ಪತ್ರೆ ವತಿಯಿಂದ  ಲೋಪವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಈ ಹಿಂದೆ ಒಡಿಶಾದಲ್ಲೂ ಕೂಡ ಇದೇ ರೀತಿಯ ಘಟನೆ ನಡೆದಿತ್ತು. ದನಮಾಝಿ ಎಂಬ ವ್ಯಕ್ತಿ ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಹೇರಿಕೊಂಡು ಮಗಳೊಂದಿಗೆ ಸಾಗುತ್ತಿದ್ದ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ದೇಶೀಯ  ಮಾಧ್ಯಮಗಳಲ್ಲಿ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com