ಗರ್ವಾಹ್/ಮೆದಿನಿನಗರ: ಜಾರ್ಖಂಡ್ ನ ಗರ್ವಾಹ್ ಜಿಲ್ಲೆಯಲ್ಲಿ ಶುಕ್ರವಾರ ಮರಳು ಗುತ್ತಿಗೆದಾರ ಹಾಗೂ ಆತನ ಸಹಚರರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಸ್ಥರು ಘಾಟಿಯಿಂದ ಮರಳು ಎತ್ತದಂತೆ ತಡೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಗುತ್ತಿಗೆದಾರ ಹಾಗೂ ಸಹಚರರು ಗ್ರಾಮಸ್ಥರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ವ್ಯಕ್ತಿ ಹಾಗೂ ಆತನ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಗ್ರಾಮಸ್ಥರು ಗುತ್ತಿಗೆದಾರರನ ಸಹಚರನನ್ನು ಹತ್ಯೆ ಮಾಡಿದ್ದಾರೆ ಎಂದು ಡಿಐಜಿ ವಿಪುಲ್ ಶುಕ್ಲಾ ಅವರು ಹೇಳಿದ್ದಾರೆ.
ಪಿಪ್ರಿ ಜದಪುರ ಬಾಲು ಘಾಟ್ ನಲ್ಲಿ ಈ ಘಟನೆ ನಡೆದಿದ್ದು, ತೀವ್ರ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಬಳಿಕ 15 ಲಾರಿಗಳು ಸೇರಿದಂತೆ ಸುಮಾರು 21 ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುತ್ತಿಗೆದಾರನ ಗುಂಡಿನ ಉದಯ್ ಯಾದವ್(55) ಹಾಗೂ ಆತನ ಪುತ್ರರಾದ ನಿರಂಜನ್(35) ಮತ್ತು ವಿಮಲೇಶ್(30) ಬಲಿಯಾಗಿದ್ದಾರೆ. ಅಲ್ಲದೆ ಉದಯ್ ಯಾದವ್ ಸಂಬಂಧಿ ಅರುಣ್ ಯಾದವ್ ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶೂಟೌಟ್ ನಂತರ ಮರಳು ಗುತ್ತಿಗೆದಾರ ನಾನಕ್ ಯಾದವ್ ಮನೆಗೆ ನುಗ್ಗಿದ ಗ್ರಾಮಸ್ಥರು, ಅಲ್ಲಿ ಬಾಡಿಗೆಗೆ ಇದ್ದ ಗುತ್ತಿಗೆದಾರನ ಸಿಬ್ಬಂದಿಯೊಬ್ಬರ ಮೇಲೆ ದಾಳಿ ಮಾಡಿ, ಹತ್ಯೆ ಮಾಡಿದ್ದಾರೆ.