ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪತ್ನಿಯ ಸಂಬಂಧಿಯ ಮದುವೆಯಲ್ಲಿ ಮಹಾರಾಷ್ಟ್ರದ ಸಚಿವರು, ಶಾಸಕರು, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಶುಕ್ರವಾರ ನಾಸಿಕ್ ನಲ್ಲಿ ನಡೆದ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪತ್ನಿಯ ಸಂಬಂಧಿಯ ಮದುವೆಯಲ್ಲಿ ಮಹಾರಾಷ್ಟ್ರದ ನೀರಾವರಿ ಸಚಿವ ಗಿರೀಶ್ ಮಹಾಜನ್ ಸೇರಿದಂತೆ ಹಲವು ಸ್ಥಳೀಯ ಶಾಸಕರು ಭಾಗಿಯಾಗಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿಚಾರ ವ್ಯಾಪಗೆ ವಿವಾದಕ್ಕೀಡಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಗಿರೀಶ್ ಮಹಾಜನ್, ಅದು ಭೂಗತ ಪಾತಕಿ ಸಂಬಂಧಿ ಮದುವೆ ಎಂದು ತಿಳಿದಿರಲಿಲ್ಲ. ವರನ ತಂದೆ ಸ್ಥಳೀಯ ಪ್ರಭಾವಿ ರಾಜಕೀಯ ಮುಖಂಡರಾಗಿದ್ದರು. ಅವರ ಕಡೆಯಿಂದ ಆಹ್ವಾನ ಬಂದಿತ್ತು. ವರನ ತಂದೆ ಸ್ಥಳೀಯವಾಗಿ ಉತ್ತಮ ಸಮಾಜಸೇವಕರಾಗಿದ್ದು, ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ನಾನು ಕೂಡ ಸ್ಥಳೀಯ ರಾಜಕಾರಣಿ ಮತ್ತು ನಾಸಿಕ್ ಉಸ್ತುವಾರಿ ಸಚಿವನಾದ್ದರಿಂದ ಕಾರ್ಯಕ್ರಮಕ್ಕೆ ತೆರಳಲೇ ಬೇಕಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಪ್ರಕರಣ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ದೇವೇಂದ್ರ ಫಡ್ನವೀಸ್ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಈ ವಿವಾಹದಲ್ಲಿ ಶಿಕ್ಷಣ ಸಚಿವ ಗಿರೀಶ್ ಮಹಾಜನ್, ಬಿಜೆಪಿ ಶಾಸಕರುಗಳಾದ ದೇವಯಾನಿ ಫರಾಂಡೆ, ಬಾಳಾ ಸಾಹೇಬ್ ಸನಪ್, ಸೀಮಾ ಹಿಯಾಯ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.
Advertisement