ಕೇರಳದಲ್ಲಿ ಗೋಮಾಂಸ ಉತ್ಸವ: ಪ್ರಧಾನಿ ಮೋದಿಗೆ ಪತ್ರ ಬರೆದ ಪಿಣರಾಯಿ ವಿಜಯನ್
ಜಾನುವಾರು ಮಾರುಕಟ್ಟೆಗಳಲ್ಲಿ ಹತ್ಯೆಯ ಉದ್ದೇಶಕ್ಕೆ ಪಶುಗಳನ್ನು ಮಾರಬಾರದು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶದ ವಿರುದ್ದ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದು...
ನವದೆಹಲಿ: ಜಾನುವಾರು ಮಾರುಕಟ್ಟೆಗಳಲ್ಲಿ ಹತ್ಯೆಯ ಉದ್ದೇಶಕ್ಕೆ ಪಶುಗಳನ್ನು ಮಾರಬಾರದು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಆದೇಶದ ವಿರುದ್ದ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಗೋಮಾಂಸವನ್ನು ಭಾರೀ ಪ್ರಮಾಣದಲ್ಲಿ ಬಳಸುವ ಕೇರಳ ರಾಜ್ಯದಲ್ಲಿ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ.
ಗೋಹತ್ಯೆಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿರುವ ಹಿನ್ನಲೆ ಕೇರಳ ರಾಜ್ಯದ ಹಲವೆಡೆ ನಿನ್ನೆಯಷ್ಟೇ ಯುವ ಕಾಂಗ್ರೆಸ್ ಹಾಗೂ ಎಡರಂಗದ ಕಾರ್ಯಕರ್ತರು ಗೋಮಾಂಸ ಉತ್ಸವವನ್ನು ಆಚರಿಸಿದ್ದಾರೆ.
ಕಣ್ಣೂರಿನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಾರ್ವಜನಿಕವಾಗಿಯೇ ಗೋವುಗಳನ್ನು ಹತ್ಯೆ ಮಾಡಿ ಕೇಂದ್ರದ ವಿರದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನಲೆಯಲ್ಲಿ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದು, ಪತ್ರಕ್ಕೆ ಬರುವ ಉತ್ತರ ಆಧರಿಸಿ ಹೊಸ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಗೋಹತ್ಯೆ ಮೇಲಿನ ನಿರ್ಬಂಧದಿಂದ ಲಕ್ಷಾಂತರ ಭಾರತೀಯರ ಜೀವನದ ಮೇಲೆ ಹೊಡೆತ ಬೀಳಲಿದೆ. ಅಲ್ಲದೆ, ಈ ರೀತಿಯ ನಿರ್ಧಾರ ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಕಠಿಣ ನಿರ್ಧಾರದಿಂದ ದಲಿತರು, ರೈತರಿಗೂ ಹೊಡೆತ ಬೀಳಲಿದೆ ಎಂದು ಪಿಣರಾಯಿ ಕಿಡಿಕಾರಿದ್ದಾರೆ.