ಲಖನೌ: ರೈಲ್ವೇ ಗುತ್ತಿಗೆದಾರನೊಬ್ಬ ಜರ್ಮನ್ ಮೂಲದ ಪ್ರಜೆಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ಉತ್ತರಪ್ರದೇಶದ ಸೋನ್'ಭದ್ರಾದ ರೈಲು ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ಹೋಲ್ಗರ್ ಎರಿಕ್ ಥಳಿತಕ್ಕೊಳಗಾಗಿರುವ ಜರ್ಮನ್ ಪ್ರಜೆಯಾಗಿದ್ದಾರೆ. ಅಮನ್ ಕುಮಾರ್ ಜರ್ಮನ್ ಪ್ರಜೆಗೆ ಥಳಿಸಿದ ರೈಲ್ವೇ ಗುತ್ತಿಗೆದಾರನಾಗಿದ್ದಾನೆ.
ಅಗೋರಿಗೆ ಪ್ರಯಾಣಿಸುವ ಸಲುವಾಗಿ ಹೋಲ್ಗರ್ ಎರಿಕ್ ಅವರು ರೈಲಿಗೆ ಕಾಯುತ್ತಿದ್ದರು. ಈ ವೇಳೆ ಅಮನ್ ಕುಮಾರ್ ಹೋಲ್ಗರ್ ಅವರಿಗೆ ಭಾರತಕ್ಕೆ ಸ್ವಾಗತ ಎಂದು ನಮಸ್ಕರಿಸಿದ್ದಾರೆ. ಇದಕ್ಕೆ ಹೋಲ್ಗರ್ ಯಾವುದೇ ಪ್ರತಿಕ್ರಿಯೆ ನೀಡದೆ ಅಮನ್ ಅವರಿಗೆ ಹೊಡೆದಿದ್ದಾರೆ. ಇದರಿಂದ ಕುಪಿತಗೊಂಡಿರುವ ಅನ್ ಹೋಲ್ಗರ್ ಅವರನ್ನು ನೆಲಕ್ಕೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ವರದಿಗಳು ತಿಳಿಸಿವೆ.
ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಅಮನ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಹೇಳಿಕೆ ನೀಡಿರುವ ಅಮನ್, ನಾನು ಮುಗ್ದ, ಹೋಲ್ಗರ್ ಎರಿಕ್ ಅವರಿಗೆ ನಾನು ವೆಲ್'ಕಮ್ ಟು ಇಂಡಿಯಾ (ಭಾರತಕ್ಕೆ ಸ್ವಾಗತ) ಎಂದು ಹೇಳಿದೆ. ಈ ವೇಳೆ ಹೋಲ್ಗರ್ ಉದ್ಧಟತನವನ್ನು ಪ್ರದರ್ಶಿಸಿ ನನಗೆ ಹೊಡೆದು, ಉಗಿದಿದ್ದ ಎಂದು ಹೇಳಿಕೊಂಡಿದ್ದಾನೆ.
ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶದ ಆಗ್ರಾದಲ್ಲಿ ಸ್ವಿಸ್ ದಂಪತಿಗಳಿಗೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ನಡೆಸಿತ್ತು.