ಆನಂದ್(ಗುಜರಾತ್): ಅಹಮದಾಬಾದ್-ಇಂದೋರ್ ಹೆದ್ದಾರಿಯಲ್ಲಿ ಮಂಗಳವಾರ ಬೆಳಗಿನ ಜಾವ ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಆನಂದ್ ಜಿಲ್ಲೆಯಲ್ಲಿ ನಡೆದಿದೆ.
ಮೃತರೆಲ್ಲಾ ಮಧ್ಯಪ್ರದೇಶದ ಅಲಿರಾಜ್ ಪುರ ಜಿಲ್ಲೆಯ ಸೇಜವಾಡಾ ಗ್ರಾಮದ ಕಾರ್ಮಿಕರು. ಅಹಮದಾಬಾದ್ ಸಮೀಪದ ಧೋಲ್ ಕಾದಿಂದ ಮರಳುತ್ತಿದ್ದಾಗ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ 13 ಮಂದಿ ದಾರುಣ ಸಾವನ್ನಪ್ಪಿದ್ದು 8 ಮಂದಿಗೆ ಗಂಭೀರ ಗಾಯಗಳಾಗಿವೆ.
ಮೃತರಲ್ಲಿ ಆರು ಮಹಿಳೆಯರು ಸೇರಿದಂತೆ 13 ಮಂದಿ ಮೃತಪಟ್ಟಿದ್ದು ಜೀಪ್ ಚಾಲಕ ಸಹ ಮೃತಪಟ್ಟಿದ್ದಾನೆ. ಇನ್ನುಳಿದಂತೆ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ನಲ್ಲಿ ಒಟ್ಟು 25 ಮಂದಿ ಪ್ರಯಾಣಿಸುತ್ತಿದ್ದರು ಎಂದು ಕಠಲಾಲ್ ಪೊಲೀಸ್ ಠಾಣೆಯ ಎಸ್ಐ ಎಜಿ ರಾಠೋಡ್ ತಿಳಿಸಿದ್ದಾರೆ.