ಝಜ್ಜಾರ್: ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಆಕ್ರೋಶಗೊಂಡ ಇಲ್ಲಿನ ಖಾಸಗಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆಯೇ ಕುಡುಗೋಲುನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಅಕ್ಟೋಬರ್ 12ರಂದು ಶಾಲಾ ಕೊಠಡಿಯಲ್ಲಿ ಪೇಪರ್ ಪರೀಕ್ಷಿಸುತ್ತಿದ್ದ ಗಣಿತ ಶಿಕ್ಷಕ ರವೀಂದರ್ ಅವರ ಮೇಲೆ 17 ವರ್ಷದ ವಿದ್ಯಾರ್ಥಿ ಕುಡುಗೋಲಿನಿಂದ ಹಲವು ಬಾರಿ ಇರಿದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಗರ್ಗ್ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಯೇ ತನ್ನ ಶಿಕ್ಷಕನ ಮೇಲೆ ದಾಳಿ ನಡೆಸುತ್ತಿರುವ ರಕ್ತಸಿಕ್ತ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಗಂಭೀರವಾಗಿ ಗಾಯಗೊಂಡ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಗರ್ಗ್ ಅವರು ಹೇಳಿದ್ದಾರೆ.
ರವೀಂದರ್ ಅವರು ಗಣಿತ ವಿಷಯದಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಶುಕ್ರವಾರ ನಡೆಯಬೇಕಿದ್ದ ಪೋಷಕರ ಸಭೆಯಲ್ಲಿ ಬಹಿರಂಗಪಡಿಸುವುದಾಗಿ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಗರ್ಗ್ ಅವರು ತಿಳಿಸಿದ್ದಾರೆ.