ಈ ಹಿಂದಿನ ಕಾಂಗ್ರೆಸ್ ಸರ್ಕಾರದ ತಲೆ ನೋವಿಗೆ ಕಾರಣವಾಗಿದ್ದ ಮತ್ತು ಮುಚ್ಚಿಹೋಗಿರುವ ಕುಖ್ಯಾತ ಬೊಫೋರ್ಸ್ ಹಗರಣಕ್ಕೆ ಮತ್ತೆ ಮರುಜೀವ ಬರುವ ಸಾಧ್ಯತೆಯಿದ್ದು, ಪ್ರಕರಣದ ತನಿಖೆಯನ್ನು ಪುನರಾರಂಭ ಮಾಡಲು ಸಿಬಿಐ ಕೇಂದ್ರ ಸರ್ಕಾರದ ಅನುಮತಿ ಕೋರಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವಂತೆ ಸಿಬಿಐ ಸಂಸ್ಥೆ ಕೇಂದ್ರ ಸರ್ಕಾರವನ್ನು ಕೋರಿದ್ದು, ಒಂದು ವೇಳೆ ಸುಪ್ರೀಂ ಕೋರ್ಟ್ ಈ ಮೇಲ್ಮನವಿಯನ್ನು ಅಂಗೀಕರಿಸಿದರೆ ಮತ್ತೆ ದಶಕಗಳ ಹಿಂದಿನ ಕುಖ್ಯಾತ ಹಗರಣದ ತನಿಖೆ ಪುನರಾರಂಭಕ್ಕೆ ಚಾಲನೆ ದೊರೆಯಲಿದೆ.