ಲಖನೌ: ಉತ್ತರಪ್ರದೇಶದಲ್ಲಿ ಮತ್ತೆ ರೈಲು ದುರಂತ ಸಂಭವಿಸಿದೆ. ಶಕ್ತಿಕುಂಚ್ ಎಕ್ಸ್'ಪ್ರೆಸ್'ನ 7 ಬೋಗಿಗಳು ಹಳಿ ತಪ್ಪಿರುವ ಘಟನೆ ಗುರುವಾರ ನಡೆದಿದೆ.
ಬೆಳಿಗ್ಗೆ 6.25ರ ಸುಮಾರಿಗೆ ಉತ್ತರಪ್ರದೇಶದ ಸೋನ್ ಭದ್ರಾದ ಓಬ್ರಾ ಬಳಿ ಹೌರಾ-ಜಬಲ್ಪುರ್ ನಡುವೆ ಸಂಚರಿಸುವ ಶಕ್ತಿಕುಂಜ್ ಎಕ್ಸ್'ಪ್ರೆಸ್ ರೈಲಿನ 7 ಬೋಗಿಗಳು ಹಳಿತಪ್ಪಿದೆ. ಘಟನೆಯಲ್ಲಿ ಸಾವು-ನೋವುಗಳು ಸಂಭವಿಸಿರುವ ಕುರಿತಂತೆ ವರದಿಗಳಾಗಿಲ್ಲ.
ರೈಲು ಹಳಿ ತಪ್ಪಿದ ಹಿನ್ನಲೆಯಲ್ಲಿ ಇತರೆ ರೈಲುಗಳ ಸಂಚಾರಗಳಲ್ಲಿ ವ್ಯತ್ಯಯ ಉಂಟಾಗಿದೆ. ಘಟನೆಯಲ್ಲಿ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಯಾಣಿಕರನ್ನು ಉಳಿದ ಬೋಗಿಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಈ ಘಟನೆ ಸೇರಿದಂತೆ ಒಟ್ಟು ನಾಲ್ಕು ರೈಲು ದುರಂತಗಳು ಸಂಭವಿಸಿದೆ. ಆಗಸ್ಟ್ 19 ರಂದು ಮುಜಾಫರ್ ನಗರ ಜಿಲ್ಲೆಯಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿ ದುರಂತ ಸಂಭವಿಸಿತ್ತು. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿ 156 ಮಂದಿ ಗಾಯಗೊಂಡಿದ್ದರು. ಇದಾದ ಬಳಿಕ ಆಗಸ್ಟ್ 23 ರಂದು ಕೈಫಿಯತ್ ಎಕ್ಸ್ ಪ್ರೆಸ್ ನ 10 ಬೋಗಿಗಳು ಹಳಿ ತಪ್ಪು 100 ಪ್ರಯಾಣಿಕರಿಗೆ ಗಾಯಗಳಾಗಿತ್ತು.
ಪಿಯೂಷ್ ಗೋಯಲ್ ಅವರು ಕೇಂದ್ರ ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ವಾರದದೊಳಗೇ ರೈಲು ಅವಘಡ ಸಂಭವಿಸಿದೆ. ಪದೇ ಪದೇ ರೈಲು ದುರಂತಗಳು ಸಂಭವಿಸುತ್ತಿದ್ದ ಹಿನ್ನಲೆಯಲ್ಲಿ ಈ ಹಿಂದೆ ರೈಲ್ವೇ ಖಾತೆಯನ್ನು ಸುರೇಶ್ ಪ್ರಭು ಅವರಿಂದ ಬಲಾವಣೆ ಮಾಡಿಕೊಳ್ಳಲಾಗಿತ್ತು.