ಪತ್ರಕರ್ತರರ ಮೇಲೆ ಹಲ್ಲೆ
ಪತ್ರಕರ್ತರರ ಮೇಲೆ ಹಲ್ಲೆ

ರ‍್ಯಾನ್ ಪ್ರತಿಭಟನೆ: ಗುರುಗ್ರಾಮದಲ್ಲಿ ಮಾಧ್ಯಮ ಸಿಬ್ಬಂದಿ ಮೇಲೆ ಹಲ್ಲೆ!

ಗುರುಗಾಂವ್ ನ ರ‍್ಯಾನ್ ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆ ಪ್ರಕರಣ ಸಂಬಂಧ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಮಾಧ್ಯಮ ಸಿಬ್ಬಂದಿಗಳ ಮೇಲೂ ಹಲ್ಲೆಯಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸುವ ನೆಪದಲ್ಲಿ ಪೊಲೀಸರು ಸುದ್ದಿಗಾರರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
Published on

ನವದೆಹಲಿ: ಗುರುಗಾಂವ್ ನ ರ‍್ಯಾನ್ ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆ ಪ್ರಕರಣ ಸಂಬಂಧ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಮಾಧ್ಯಮ ಸಿಬ್ಬಂದಿಗಳ ಮೇಲೂ ಹಲ್ಲೆಯಾಗಿದ್ದು, ಪ್ರತಿಭಟನಾಕಾರರನ್ನು ಚದುರಿಸುವ ನೆಪದಲ್ಲಿ ಪೊಲೀಸರು ಸುದ್ದಿಗಾರರನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮೂಲಗಳ ಪ್ರಕಾರ ಗುರುಗ್ರಾಮದ ರ‍್ಯಾನ್ ಇಂಟರ್'ನ್ಯಾಷನಲ್ ಶಾಲೆಯ ಮುಂಭಾಗದಲ್ಲೇ ಸುದ್ದಿಸಂಸ್ಥೆಯೊಂದರ ಇಬ್ಬರು ಸಿಬ್ಬಂದಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಈ ವೇಳೆ ಎಎನ್ ಐ ಸುದ್ದಿ ಸಂಸ್ಥೆಯ ನವೀನ್ ಯಾದವ್ ಮತ್ತು ವಿನೋದ್ ಕುಮಾರ್ ಎಂಬ ಪತ್ರಕರ್ತರು ಗಾಯಗೊಂಡಿದ್ದಾರೆ. ನವೀನ್ ಯಾದವ್ ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, ವಿನೋದ್ ಕುಮಾರ್ ಅವರ ಕೈಕಾಲುಗಳಿಗೆ ಗಾಯಗಳಾಗಿವೆ. ಆಲ್ಲದೆ ಸುದ್ದಿಗಾರರ ವಾಹನಗಳ ಮೇಲೂ ದಾಳಿ ಮಾಡಲಾಗಿದ್ದು, ಕಾರಿನ ಹಿಂಬದಿ ಗಾಜು ಪುಡಿ-ಪುಡಿಯಾಗಿದೆ.

ಇನ್ನು ಸುದ್ದಿಗಾರರ ಮೇಲಿನ ಹಲ್ಲೆ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ವಿಪಕ್ಷಗಳು ಸರ್ಕಾರದ ವೈಖರಿ ಹಾಗೂ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ. ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ರಾಮದಾಸ್ ಅಠವಾಳೆ ಅವರು, ಪತ್ರಕರ್ತರ ಸುರಕ್ಷತೆಗೆ ಎಲ್ಲ ರಾಜ್ಯ ಸರ್ಕಾರಗಳೂ ಚರ್ಚಿಸಿ ಸೂಕ್ತ ಕಾನೂನು ಜಾರಿ ಮಾಡಬೇಕು ಎಂದು ಹೇಳಿದ್ದಾರೆ.

ಇನ್ನು ರ‍್ಯಾನ್ ಇಂಟರ್'ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಯ ಭೀಕರ ಹತ್ಯೆಯನ್ನು ಖಂಡಿಸಿ ಗುರುಗ್ರಾಮದಲ್ಲಿ  ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಇಂದು ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ನಡೆಸುತ್ತಿರುವ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಬಸ್ ಚಾಲಕನನ್ನು ತಪ್ಪಿತಸ್ಥ ಎಂದು ತೋರಿಸಲಾಗುತ್ತಿದ್ದು ಆದರೆ ಇದರ ಜವಾಬ್ದಾರಿಯನ್ನು ಶಾಲೆಯ ಆಡಳಿತ ಮಂಡಳಿ ಹೊರಬೇಕು ಎಂದು ಜತೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಾಲಕನ ಪೋಷಕರು ಆಗ್ರಹಿಸಿದ್ದಾರೆ.  ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ನ್ಯಾಯ ದೊರಕಿಸುವುದಾಗಿ ಹರಿಯಾಣದ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಭರವಸೆ ನೀಡಿದ್ದಾರೆ.

ಕಳೆದ ಶುಕ್ರವಾರ ರ‍್ಯಾನ್ ಇಂಟರ್'ನ್ಯಾಷನಲ್ ಶಾಲೆ ಶೌಚಾಲಯದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಕುತ್ತಿಗೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಶಾಲಾ ವಾಹನದ ನಿರ್ವಾಹಕನೇ ಈ ಕುಕೃತ್ಯವನ್ನು ಎಸಗಿದ್ದಾನೆಂದು ಹೇಳಲಾಗುತ್ತಿದ್ದು ಪೊಲೀಸರು ಆತನನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com