ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ಮನೆಗೆ ನುಗ್ಗಿ ಯೋಧನ ಮೇಲೆ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮರೆದಿದ್ದು, ಬಿಎಸ್ಎಫ್ ಯೋಧರೊಬ್ಬರ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆಂದು ಗುರುವಾರ ತಿಳಿದುಬಂದಿದೆ...
ಉಗ್ರರ ದಾಳಿಯಲ್ಲಿ ಮಡಿದ ಯೋಧ
ಉಗ್ರರ ದಾಳಿಯಲ್ಲಿ ಮಡಿದ ಯೋಧ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮರೆದಿದ್ದು, ಬಿಎಸ್ಎಫ್ ಯೋಧರೊಬ್ಬರ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆಂದು ಗುರುವಾರ ತಿಳಿದುಬಂದಿದೆ. 

ಬಂಡಿಪೋರ ಜಿಲ್ಲೆಯ ಹಜಿನ್ ಟೌನ್ ನಲ್ಲಿರುವ ಯೋಧನ ಮನೆಗೆ ಕಳೆದ ರಾತ್ರಿ ಉಗ್ರರ ಗುಂಪು ದಾಳಿ ನಡೆಸಿದ್ದು, ಈ ವೇಳೆ ಯೋಧ ಸೇರಿ ಕುಟುಂಬಸ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ಉಗ್ರರ ದಾಳಿಕೆ ಬಿಎಸ್ಎಫ್ ಯೋಧ ರಮೀಜ್ ಪರ್ರಯ್ ಹುತಾತ್ಮರಾಗಿದ್ದು, ಗಾಯಗೊಂಡಿರುವ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಯೋಧ ರಮೀಜ್ ಅವರು ಕೆಲ ದಿನಗಳ ಹಿಂದಷ್ಟೇ ರಜೆ ನಿಮಿತ್ತ ಮನೆಗೆ ಬಂದಿದ್ದರು. ರಮೀಜ್ ಮನೆಗೆ ಬಂದಿರುವ ವಿಚಾರ ತಿಳಿದ ಉಗ್ರರು ಕಳೆದ ರಾತ್ರಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ಕುಟುಂಬಸ್ಥರು ಮುಖಾಮುಖಿಯಾದಾಗ ಅವರ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ರಮೀಜ್ ಅವರನ್ನು ಅಪಹರಣ ಮಾಡಲು ಉಗ್ರರು ಯತ್ನ ನಡೆಸಿದ್ದಾರೆ. ಈ ವೇಳೆ ಉಗ್ರರ ವಿರುದ್ದ ರಮೀಜ್ ತಿರುಗಿ ಬಿದ್ದಿದ್ದರಿಂದ ಮನೆಯ ಹೊರಗೆ ಎಳೆದು ತಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ರಮೀಜ್ ಅವರ ತಂದೆ, ಇಬ್ಬರು ಸಹೋದರರು ಹಾಗೂ ಚಿಕ್ಕಮ್ಮ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ರಮೀಜ್ ಅವರ ಚಿಕ್ಕಮ್ಮ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಉಳಿದ ಮೂವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆಂದು ವರದಿಗಳು ತಿಳಿಸಿವೆ. 

ರಮೀಜ್ ಪರ್ರಯ್ (30) ಬಿಎಸ್ಎಪ್ 73 ಬೆಟಾಲಿಯನ್ ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಉಗ್ರರ ದಾಳಿ ಅನಾಗರೀಕ ಹಾಗೂ ಅಮಾನವೀಯ ಕೃತ್ಯವಾಗಿದೆ. ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿ ಎಸ್.ಪಿ. ವೈದ್ ಅವರು ಹೇಳಿದ್ದಾರೆ. 

ಕಳೆದ ಮೇ ತಿಂಗಳಿನಲ್ಲಿಯೂ ಕೂಡ ಉಗ್ರರು ಇದೇ ರೀತಿಯಲ್ಲಿಯೇ ಲೆ. ಉಮರ್ ಫಯಾಜ್ ರನ್ನು ಅಪಹರಿಸಿ ಹತ್ಯೆ ಮಾಡಿದ್ದರು. ಮೇ.9 ರಂದು ಉಮರ್ ಫಯಾಜ್ ಅವರು ರಜೆ ನಿಮಿತ್ತ ಊರಿಗೆ ಬಂದಿದ್ದರು. ಈ ವೇಳೆ ಸಂಬಂಧಿಯೊಬ್ಬರ ಮದುವೆಗೆ ಹೋದಾಗ ಅಲ್ಲಿಂದ ಯೋಧನನ್ನು ಉಗ್ರರು ಅಪಹರಿಸಿದ್ದರು. ಇದಾದ ಕೆಲ ದಿನಗಳ ಬಳಿಕ ಶೋಪಿಯಾನ್ ಜಿಲ್ಲೆಯಲ್ಲಿ ತಲೆ ಮತ್ತು ಹೊಟ್ಟೆಗೆ ಗುಂಡೇಟು ಬಿದ್ದಿರುವ ಸ್ಥಿತಿಯಲ್ಲಿ ಉಮರ್ ಅವರ ಮೃತದೇಹ ಪತ್ತೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com