ಚೆನ್ನೈ: ಡಿಎಂಕೆ ಸಂಸದೆ ಕನಿಮೋಳಿ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ಅನೈತಿಕ ಸಂತಾನ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ರಾಜಾ ಅವರು ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರನ್ನು ಪ್ರಶ್ನಿಸಿದಂತೆ ಅಕ್ರಮ ಸಂಬಂಧಕ್ಕೆ ಹುಟ್ಟಿದ ರಾಜ್ಯಸಭಾ ಸದಸ್ಯೆಯನ್ನು ಪ್ರಶ್ನಿಸುತ್ತಾರಾ? ಎಂದು ನೇರವಾಗಿ ಕನಿಮೋಳಿ ಹೆಸರು ಪ್ರಸ್ತಾಪಿಸದೆ ರಾಜಾ ಟ್ವೀಟ್ ಮಾಡಿದ್ದಾರೆ.
ನಿನ್ನೆ ರಾಜಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಪಾಲರು ಪತ್ರಕರ್ತೆ ಲಕ್ಷ್ಮಿ ಸುಬ್ರಮಣಿಯನ್ ಅವರ ಕೆನ್ನೆ ಸವರಿದ್ದರು.
ಕನಿಮೋಳಿ ಅವರು ಪತ್ರಕರ್ತೆಯ ಬೆಂಬಲಕ್ಕೆ ನಿಂತ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಟ್ವೀಟರ್ ಮೂಲಕ ಅವರ ಈ ರೀತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜಾ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕನಿಮೋಳಿ, ಅವರ ಕೀಳುಮಟ್ಟದ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ.
ಕನಿಮೋಳಿ ಅವರು ಕರುಣಾನಿಧಿ ಅವರ ಮೂರನೇ ಪತ್ನಿ ರಜತಿ ಅವರ ಮಗಳು.