ಮುಂಬೈಯ ಜೈನ ಕುಟುಂಬಕ್ಕೆ ಸೇರಿದ 24 ವರ್ಷದ ಚಾರ್ಟೆಡ್ ಅಕೌಂಟೆಂಟ್ 100ಕೋಟಿ ರೂಪಾಯಿಗೂ ಹೆಚ್ಚಿನ ತಮ್ಮ ಕುಟುಂಬದ ಉದ್ಯಮ, ವೃತ್ತಿ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.
ಸಿಎ ಮಾಡಿದ ನಂತರ ಕುಟುಂಬದ ಉದ್ಯಮವನ್ನು ಎರಡು ವರ್ಷಗಳ ಕಾಲ ನೋಡಿಕೊಳ್ಳುತ್ತಿದ್ದ ಮೋಕ್ಷೇಶ್ ಶೇತ್ ತಮ್ಮೆಲ್ಲಾ ವಿಷಯಾಸಕ್ತಿಗಳನ್ನು ತೊರೆದು ನಿನ್ನೆ ಮುಂಬೈಯ ಗಾಂಧಿನಗರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜೈನ ಸನ್ಯಾಸಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದಾರೆ ಎಂದು ಅವರ ಮಾವ ಗಿರೀಶ್ ಶೇತ್ ತಿಳಿಸಿದ್ದಾರೆ.
ಮುಂಬೈ ಮೂಲದ ಉದ್ಯಮಿ ಸಂದೀಪ್ ಶೇತ್ ಅವರ ಹಿರಿಯ ಮಗ ಮೋಕ್ಷೇಶ್ ಸನ್ಯಾಸತ್ವ ಸ್ವೀಕರಿಸಿದ ನಂತರ ಕರುಣಾಪ್ರೇಮವಿಜಯ ಜೀ ಎಂದು ಬದಲಾಗಿದ್ದಾರೆ.
ನಮ್ಮ ಕುಟುಂಬ ಗುಜರಾತ್ ರಾಜ್ಯದ ಬನಸ್ಕಾಂತ ಜಿಲ್ಲೆಯ ದೀಸ ಪಟ್ಟಣಕ್ಕೆ ಸೇರಿದ್ದಾಗಿದ್ದು ಇದೀಗ ಮುಂಬೈಯಲ್ಲಿ ನೆಲೆಸಿದೆ. ಅಲ್ಯೂಮಿನಿಯಂ ವ್ಯಾಪಾರ ನಡೆಸುತ್ತಿರುವ ನಮಗೆ ಸಾಂಗ್ಲಿಯಲ್ಲಿ ಫ್ಯಾಕ್ಟರಿಯಿದೆ. ಮೊದಲ ಪ್ರಯತ್ನದಲ್ಲಿಯೇ ಸಿಎ ಮಾಡಿಕೊಂಡಿರುವ ಮೋಕ್ಷೇಶ್ ಎರಡು ವರ್ಷಗಳ ಕಾಲ ತಮ್ಮ ತಂದೆಯ ವ್ಯಾಪಾರ ನೋಡಿಕೊಂಡು ನಂತರ ಇದ್ಯಾವುದರಲ್ಲಿಯೂ ಆಸಕ್ತಿಯಿಲ್ಲದೆ ಸನ್ಯಾಸಿಯಾಗಿದ್ದಾರೆ ಎಂದು ಗಿರೀಶ್ ಶೇತ್ ತಿಳಿಸಿದ್ದಾರೆ.
ಮೋಕ್ಷೇಶ್ ಉದ್ಯಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಮತ್ತು ಪ್ರಸ್ತುತ ಇಂದು 100 ಕೋಟಿಗೂ ಅಧಿಕ ವಹಿವಾಟನ್ನು ಹೊಂದಿದೆ ಎನ್ನುತ್ತಾರೆ.
ಕಳೆದ ಗುರುವಾರ 12 ವರ್ಷದ ಭವ್ಯ ಶಾ ಎಂಬ ಸೂರತ್ ವಜ್ರದ ವ್ಯಾಪಾರಿಯ ಪುತ್ರ ಕೂಡ ಸನ್ಯಾಸತ್ವ ಸ್ವೀಕರಿಸಿದ್ದನು. ಜೈನ ಮುನಿಯಾಗುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಭವ್ಯ, ಭೌತಿಕ ಸುಖಗಳನ್ನು ತೊರೆಯಲು ನನಗೆ ಸಂತೋಷವಾಗುತ್ತಿದೆ ಎಂದು ಹೇಳಿದ್ದನು.
Advertisement