ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ 5 ಆರೋಪ ಹೊರಿಸಿದ್ದ ವಿರೋಧ ಪಕ್ಷಗಳು, ಅವರ ವಿರುದ್ಧ ದುರ್ನಡತೆ ಹಾಗೂ ಅಧಿಕಾರ ದುರ್ಬಳಕೆ ಆರೋಪ ಹೊರಿಸಿತ್ತು. ಇದರೊಂದಿಗೆ ನ್ಯಾಯಾಂಗ ಮತ್ತು ರಾಜಕೀಯ ಪಕ್ಷಗಳ ನಡುವೆ ಇದೇ ಮೊದಲ ಬಾರಿಗೆ ಕಂಡು ಕೇಳರಿಯದ ಸಂಘರ್ಷ ತಲೆದೋರುವ ಸಾಧ್ಯತೆಗಳು ಕಂಡು ಬರುತ್ತಿವೆ.
ಗ್ಯಾಂಗ್ ಸ್ಟರ್ ಸೊಹ್ರಾಬುದ್ದೀನ್ ಶೇಖ್ ಅನುಮಾನಾಸ್ಪದ ಎನ್ ಕೌಂಟರ್ ಪ್ರಕರಣದ ನ್ಯಾಯಾಧೀಶ ಬಿ.ಹೆಚ್. ಲೋಯಾ ಸಾವಿನ ತನಿಖೆಗೆ ಆದೇಶಿಸಲು ದೀಪಕ್ ಮಿಶ್ರಾ ನಿರಾಕರಿಸಿದ ಹಿನ್ನಲೆಯಲ್ಲಿ ವಾಗ್ದಂಡನೆಗೆ ಕಾಂಗ್ರೆಸ್ ಮುಂದಾಗಿತ್ತು.
ನ್ಯಾಯಾಧೀಶರೊಬ್ಬರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಂದು ಸಂಸದರಿಗೆ ಎನಿಸಿದರೆ ಅವರ ವಿರುದ್ಧ ಮಹಾಭಿಯೋಗ ನಡೆಸಲು ನಿಲುವಳಿ ಮಂಡಿಸಬಹುದಾಗಿದೆ.
ಇದರಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರೂ ಬರುತ್ತಾರೆ. ಸಂವಿಧಾನದ 124 (4)ನೇ ಪರಿಚ್ಛೇದದ ಪ್ರಕಾರ ಸಂಸತ್ತಿನ ಉಭಯ ಸದನಗಳ ಅಂಗೀಕಾರದ ಬಳಿಕ, ಕೊನೆಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ವಜಾ ಮಾಡುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇರುತ್ತದೆ ಇದಕ್ಕೆ ಮಹಾಭಿಯೋಗ (ವಾಗ್ದಂಡನೆ) ಪ್ರಕ್ರಿಯೆ ಎಂದು ಕರೆಯಲಾಗುತ್ತದೆ.