ರಾಜಕೀಯದಲ್ಲಿ ಇಂದು ಸೈದ್ಧಾಂತಿಕ ಚರ್ಚೆಗಳು ಮರೆಯಾಗುತ್ತಿವೆ; ಜೈಪಾಲ್ ರೆಡ್ಡಿ

ಇಂದಿನ ರಾಜಕೀಯ ವಿಶ್ಲೇಷಣೆಯಲ್ಲಿ ಸೈದ್ಧಾಂತಿಕ ಚರ್ಚೆಗಳು ಮರೆಯಾಗುತ್ತಿದ್ದು ಬಹುತೇಕ ಜನರು ...
ಜೈಪಾಲ್ ರೆಡ್ಡಿ
ಜೈಪಾಲ್ ರೆಡ್ಡಿ

ನವದೆಹಲಿ: ಇಂದಿನ ರಾಜಕೀಯ ವಿಶ್ಲೇಷಣೆಯಲ್ಲಿ ಸೈದ್ಧಾಂತಿಕ ಚರ್ಚೆಗಳು ಮರೆಯಾಗುತ್ತಿದ್ದು ಬಹುತೇಕ ಜನರು ಬೌದ್ಧಿಕ  ಚಟುವಟಿಕೆಗಳನ್ನು ದುರ್ಬಲಗೊಳಿಸುವ ಮನೋಭಾವ ಹೊಂದಿರುತ್ತಾರೆ ಎಂದು ಮಾಜಿ ಸಚಿವ ಹಾಗೂ ಎಐಸಿಸಿ ವಕ್ತಾರ ಎಸ್ ಜೈಪಾಲ್ ರೆಡ್ಡಿ ಹೇಳಿದ್ದಾರೆ.

ತಮ್ಮ ಪುಸ್ತಕ ''Ten Ideologies — The Great Asymmetry between Agrarianism and Industrialism'' ಬಿಡುಗಡೆಗೆ ಮುನ್ನ ಮಾತನಾಡಿದ ಅವರು, ಇಂದು ಭಾರತ ಸೇರಿದಂತೆ ವಿಶ್ವದಾದ್ಯಂತ ರಾಷ್ಟ್ರೀಯತೆ ಮತ್ತು ಬಂಡವಾಳಶಾಹಿಗಳು ಮೇಲುಗೈ ಸಾಧಿಸುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.

ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಸರಿ ಪಕ್ಷದ ಸಿದ್ಧಾಂತ ರಾಷ್ಟ್ರೀಯತೆಯಾಗಿದೆ. ಅವರಲ್ಲಿ ಬಲವಾದ ಆರ್ಥಿಕ ಸಿದ್ಧಾಂತವಿದೆ ಎಂದು ನನಗೆ ಅನಿಸುವುದಿಲ್ಲ. ಅವರ ಸಿದ್ಧಾಂತವಾದ ರಾಷ್ಟ್ರೀಯತೆ ಕೋಮುವಾದದ ಇನ್ನೊಂದು ಮುಖವಷ್ಟೆ. ಧರ್ಮದ ಮೇಲೆ ಅವರ ಸಿದ್ಧಾಂತ ನಿಂತಿದೆ. ರಾಷ್ಟ್ರೀಯತೆಯಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಿರುತ್ತವೆ ಎಂದರು.

ಈ ಪುಸ್ತಕವನ್ನು ಒಂದು ಶಿಕ್ಷಣ ಅಧ್ಯಯನ ಮಟ್ಟದಲ್ಲಿ ಬರೆಯಲಾಗಿದ್ದು ಅದರಲ್ಲಿ ಇಂದಿನ ರಾಜಕೀಯದ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿಲ್ಲ. ಭಾರತದ ಇಂದಿನ ವಾಸ್ತವವನ್ನು ಪುಸ್ತಕದಲ್ಲಿ ದೂರವಿರಿಸಿದ್ದೇನೆ ಎಂದರು. ಪುಸ್ತಕದಲ್ಲಿ ನಾನು ಹೇಳಿರುವ 10 ಸಿದ್ಧಾಂತಗಳು ಆಧುನಿಕ ಮತ್ತು ಜಗತ್ತಿನ ವಿದ್ಯಮಾನಗಳಿಂದ ಹುಟ್ಟಿಕೊಂಡವುಗಳಾಗಿವೆ. 500 ವರ್ಷಗಳ ಹಿಂದೆ ರಾಷ್ಟ್ರೀಯತೆಯಂತಹ ಪರಿಕಲ್ಪನೆಗಳಿರಲಿಲ್ಲ ಎಂದರು.

ಜೈಪಾಲ್ ರೆಡ್ಡಿಯವರ ಪುಸ್ತಕದಲ್ಲಿ 10 ಸಿದ್ಧಾಂತಗಳಾದ ರಾಷ್ಟ್ರೀಯತೆ, ಪ್ರಜಾಪ್ರಭುತ್ವ, ಉದಾರವಾದಿ, ಬಂಡವಾಳಶಾಹಿ, ವಿಕಸನೀಯ ಸಮಾಜವಾದ, ಕ್ರಾಂತಿಕಾರಿ ಸಮಾಜ, ಸ್ತ್ರೀವಾದ, ಪರಿಸರವಾದ, ಪರಮಾಣು ಶಾಂತಿವಾದ ಮತ್ತು ಜಾಗತೀಕರಣ ಬಗ್ಗೆ ಹೇಳಲಾಗಿದೆ. ಅಲ್ಲದೆ ನಾಲ್ಕು ಚಳವಳಿಗಳಾದ ನವೋದಯ, ಮಾನವತಾವಾದ, ಸುಧಾರಣೆ ಮತ್ತು ವೈಜ್ಞಾನಿಕ ಕ್ರಾಂತಿಗಳ ಬಗ್ಗೆ ಕೂಡ ಪ್ರಸ್ತಾಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com