ಇನ್ನು 2010ರಲ್ಲೇ ಕೇಂದ್ರ ಸರ್ಕಾರ ನಿಯೋಜಿಸಿದ್ದ ಗಾಡ್ಗೀಳ್ ಸಮಿತಿ ನೀಡಿದ್ದ ವರದಿ ಶಿಫಾರಸುಗಳು 2011ರಿಂದ ಜಾರಿಗೆ ಬರಬೇಕಾಗಿತ್ತು. ನೈಸರ್ಗಿಕ ವಿಕೋಪಕ್ಕೆ ಕಾರಣವಾಗಬಲ್ಲ ಕಲ್ಲು ಕ್ವಾರಿಗಳ ಅಕ್ರಮವನ್ನು ನಿಗ್ರಹಿಸುವ ಬಗ್ಗೆ ಎಚ್ಚರಿಸಲಾಗಿತ್ತು. ಆದರೆ, ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿರುವ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ತೀವ್ರ ವಿರೋಧ ಎದುರಾಯಿತು. ಸುಮಾರು 552 ಪುಟಗಳ ವರದಿ ಧೂಳು ಹಿಡಿಯತೊಡಗಿತು. ಇದಾದ ಬಳಿಕ ಬಂದ ಕಸ್ತೂರಿ ರಂಗನ್ ವರದಿಯನ್ನು ಕೂಡಾ ಕೇರಳ ತಳ್ಳಿ ಹಾಕಿತ್ತು. ಅತಿ ಸೂಕ್ಷ್ಮ ವಲಯಗಳಲ್ಲಿ ಗಣಿಗಾರಿಕೆ, ರಸ್ತೆ ನಿರ್ಮಾಣಕ್ಕೆ ಕಡಿವಾಣವಾಗಲು ಸೂಚಿಸಿದ್ದ ಶಿಫಾರಸ್ಸನ್ನು ಬದಿಗೊತ್ತಿ, ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿ ನಾಶ ಮಾಡಲಾಯಿತು.