ಗಯಾ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಅಧಿಕಾರಿಯೊಬ್ಬರನ್ನು ದುಷ್ಕರ್ಮಿಗಳು ಅಪಹರಿಸಿ, ಹತ್ಯೆ ಮಾಡಿರುವ ಘಟನೆ ಶನಿವಾರ ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.
ಬ್ಯಾಂಕ್ ನ ಗ್ರಾಹಕ ಸೇವಾ ಕೇಂದ್ರದ ಮುಖ್ಯಸ್ಥ ಪಿಂಟು ಸಿಂಗ್ ಅವರನ್ನು ಶುಕ್ರವಾರ ಅಮಾಸ್ ಬಳಿ ಅಪಹರಿಸಲಾಗಿತ್ತು ಎಂದು ಅಮಾಸ್ ಪೊಲೀಸ್ ಠಾಣಾ ಅಧಿಕಾರಿ ಶ್ಯಾಮ್ ಲಾಲ್ ಸರಹ್ ಅವರು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಪಿಂಟು ಸಿಂಗ್ ಅವರನ್ನು ಅಪಹರಿಸಿದ ದುಷ್ಕರ್ಮಿಗಳು ಇಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಶ್ಯಾಮ್ ಲಾಲ್ ಹೇಳಿದ್ದಾರೆ.
ಬಿಹಾರದಲ್ಲಿ ಕಳೆದ 48 ಗಂಟೆಗಳಲ್ಲಿ ನಡೆದ ಎರಡನೇ ಕೊಲೆ ಇದಾಗಿದ್ದು, ವೈಶಾಲಿ ಜಿಲ್ಲೆಯಲ್ಲಿ ಗಂಜಾನ್ ಖೆಮ್ಕಾ ಎಂಬ ಉದ್ಯಮಿಯನ್ನು ಗುರುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಎರಡು ಹತ್ಯೆ ಖಂಡಿಸಿ ಗ್ರಾಮಸ್ಥರು ಹಿಂಸಾತ್ಮಕ ಪ್ರತಿಭಟನೆ ನಡೆಸುತ್ತಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.