ಕಡಲತೀರ ವ್ಯವಹಾರಗಳ ಸಹಕಾರ ವಿಸ್ತರಣೆಗೆ ಆಸಿಯಾನ್ ಚಿಂತಕರಿಗೆ ಭಾರತ ಒತ್ತಾಯ

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಇಂಡೋನೇಷಿಯಾದ ಜಕಾರ್ತದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಂಘ(ಆಸಿಯಾನ್) ನ ಭಾರತ ....
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಜಕಾರ್ತ: ಕಡಲತೀರ ವ್ಯವಹಾರಗಳ ಸಹಕಾರ ವಿಸ್ತರಣೆಗೆ ಭಾರತ ಒತ್ತಾಯಿಸಿದ್ದು, ಅಸಿಯಾನ್ ಶೃಂಗಸಭೆಯ ಆಯೋಜನೆ ಭಾರತಕ್ಕೆ ಸಿಕ್ಕ ಗೌರವ ಮತ್ತು ಪ್ರತಿಷ್ಠೆಯ ವಿಷಯವಾಗಿದೆ ಎಂದು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಂದು ಇಂಡೋನೇಷಿಯಾದ ಜಕಾರ್ತದಲ್ಲಿ ಆಗ್ನೇಯ ಏಷ್ಯಾದ ರಾಷ್ಟ್ರಗಳ ಸಂಘ(ಆಸಿಯಾನ್) ನ ಭಾರತ ಸಂಪರ್ಕಜಾಲದ ಚಿಂತಕರ ಚಾವಡಿಯ 5ನೇ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿದರು. 
ನಂತರ ಅವರು ಮಾತನಾಡಿ, ಇಂದಿನಿಂದ ಮೂರು ವಾರಗಳಲ್ಲಿ ಆಸಿಯಾನ್ ಶೃಂಗಸಭೆಯ 5ನೇ ದುಂಡುಮೇಜಿನ ಸಭೆ ನಡೆಯಲಿದ್ದು, ಆಸಿಯಾನ್ ಮತ್ತು ಭಾರತ ರಾಷ್ಟ್ರಗಳ ನಡುವಣ ಸಂಬಂಧಕ್ಕೆ 25 ವರ್ಷಗಳು ಕಳೆದ ಸಂದರ್ಭದಲ್ಲಿ ಭಾರತ ಈ ಸಭೆಯ ಆತಿಥ್ಯ ವಹಿಸಿಕೊಳ್ಳುತ್ತಿರುವುದು ಮುಖ್ಯವಾಗಿದೆ ಎಂದರು.
ಶೃಂಗಸಭೆಯಲ್ಲಿನ ಮಾತುಕತೆಗಳು ಸಂದರ್ಭೋಚಿತವಾಗಿದ್ದು, ಭಾರತಕ್ಕೆ ಇದೊಂದು ಉತ್ತಮ ಅವಕಾಶ. ಇದರಲ್ಲಿ ನಮ್ಮ ನಾಯಕರಿಗೆ ಪ್ರಯೋಜನಕಾರಿ ಅಂಶಗಳು ಸಿಗಲಿವೆ. ಇದೇ ತಿಂಗಳ 25ರಂದು ದೆಹಲಿಯಲ್ಲಿ ನಡೆಯುವ ಶೃಂಗಸಭೆಯ ಸಮಾರೋಪದಲ್ಲಿ ನಾಯಕರು ಪರಸ್ಪರ ಭೇಟಿಯಾಗಲಿದ್ದಾರೆ ಎಂದರು.
ಸಮಾಲೋಚನೆಯನ್ನು ಬಲಪಡಿಸುವಂತೆ ಚಿಂತಕರನ್ನು ಒತ್ತಾಯಿಸಿದ ಸುಷ್ಮಾ ಸ್ವರಾಜ್ ಅವರು ಬಂದರು, ವಾಣಿಜ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಹಕಾರವನ್ನು ವರ್ಧಿಸಲು ಸಲಹೆಗಳನ್ನು ನೀಡುವಂತೆ ಆಸಿಯಾನ್ ನಾಯಕರನ್ನು ಸುಷ್ಮಾ ಸ್ವರಾಜ್ ಒತ್ತಾಯಿಸಿದರು.
ನವ ಭಾರತದ ಉದಯಕ್ಕಾಗಿ ನಾನು ಎದುರು ನೋಡುತ್ತಿದ್ದು ತಮ್ಮ ತಮ್ಮ ದೇಶಗಳಲ್ಲಿನ ಅಭಿವೃದ್ಧಿಗೆ ಭಾರತ ಮತ್ತು ಆಸಿಯಾನ್ ದೇಶಗಳು ಒಟ್ಟಾಗಿ ಕೆಲಸ ಮಾಡಬಹುದು ಎಂದರು.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಆಸಿಯಾನ್ ನಾಯಕರನ್ನು ಅತಿಥಿಗಳನ್ನಾಗಿ ಕರೆಯುತ್ತಿರುವುದು ಭಾರತ ದೇಶಕ್ಕೆ ಹೆಮ್ಮೆ ಮತ್ತು ಗೌರವದ ವಿಷಯವಾಗಿದೆ ಎಂದರು.
ಇದಕ್ಕೂ ಮುನ್ನ ಎರಡು ದಿನಗಳ ಇಂಡೊನೇಷಿಯಾ ಭೇಟಿಯಲ್ಲಿರುವ ಸುಷ್ಮಾ ಸ್ವರಾಜ್, ಇಂದು ಆಸಿಯಾನ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಟೊ ಪದುಕ ಲಿಮ್ ಹೊಯ್ ಅವರನ್ನು ಭೇಟಿ ಮಾಡಿದರು.
ಇಂದು ಮಧ್ಯಾಹ್ನ ಸಚಿವೆ ಸುಷ್ಮಾ ಸ್ವರಾಜ್ ಜಕಾರ್ತದಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನಿನ್ನೆ ಜಕಾರ್ತದಲ್ಲಿ ನಡೆದ 5ನೇ ಜಂಟಿ ಆಯೋಗ ಸಭೆಯಲ್ಲಿ ಭಾರತ ಮತ್ತು ಇಂಡೊನೇಷಿಯಾ ಭಯೋತ್ಪಾದನೆಯನ್ನು ಎಲ್ಲಾ ಮಟ್ಟದಲ್ಲಿ ಅಂತಾರಾಷ್ಟ್ರೀಯ ವೇದಿಕೆ ಮೂಲಕ ಖಂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com