ಸಾಂದರ್ಭಿಕ ಚಿತ್ರ
ದೇಶ
ಸಚಿನ್ ಪುತ್ರಿ ಸಾರಾಳನ್ನು ಮದುವೆ ಮಾಡಿಕೊಡಿ, ಇಲ್ಲ ಆಕೆಯನ್ನು ಅಪಹರಿಸುತ್ತೇನೆ: ದುಷ್ಕರ್ಮಿಯ ಬೆದರಿಕೆ
ಭಾರತೀಯ ಕ್ರಿಕೆಟ್ ನ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹಿರಿಯ ಪುತ್ರಿ ಸಾರಾ ತೆಂಡೂಲ್ಕರ್ ಅವರನ್ನು ತನಗೆ ಮದುವೆ ಮಾಡಿಕೊಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ ಎಂದು ಬೆದರಿಕ ಹಾಕಿದ್ದ ದುಷ್ಕರ್ಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮುಂಬೈ: ಭಾರತೀಯ ಕ್ರಿಕೆಟ್ ನ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹಿರಿಯ ಪುತ್ರಿ ಸಾರಾ ತೆಂಡೂಲ್ಕರ್ ಅವರನ್ನು ತನಗೆ ಮದುವೆ ಮಾಡಿಕೊಡಬೇಕು. ಇಲ್ಲವಾದರೆ ಆಕೆಯನ್ನು ಅಪಹರಿಸುತ್ತೇನೆ ಎಂದು ಬೆದರಿಕ ಹಾಕಿದ್ದ ದುಷ್ಕರ್ಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ಬಂಧಿತ ವ್ಯಕ್ತಿಯನ್ನು ಪಶ್ಚಿಮ ಬಂಗಾಳ ಮೂಲದ ದೇವ್ ಕುಮಾರ್ ಮೈಟಿ ಎಂದು ಗುರುತಿಸಲಾಗಿದ್ದು, ಈತ ಪಶ್ಚಿಮ ಬಂಗಾಳ ಪುರ್ಬಾ ಮೆಡಿನಿಪುರ್ ಜಿಲ್ಲೆಯ ನಿವಾಸಿ ಎಂದು ತಿಳಿದುಬಂದಿದೆ. 32 ವರ್ಷದ ಈತ ಇತ್ತೀಚೆಗೆ ಹಲವು ದಿನಗಳಿಂದ ಸಾರಾ ತೆಂಡೂಲ್ಕರ್ ಕುರಿತು ಪೋಸ್ಟ್ ಗಳನ್ನು ಮತ್ತು ಅವಹೇಳನಕಾರಿ ಕಮೆಂಟ್ ಗಳನ್ನು ಹಾಕುತ್ತಿದ್ದನಂತೆ.
ನನ್ನನ್ನು ಮದುವೆಯಾಗು, ಇಲ್ಲವಾದಲ್ಲಿ ನಿನ್ನನ್ನು ಅಪಹರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನಂತೆ. ಅಲ್ಲದೆ ಸಚಿನ್ ಅವರ ಮುಂಬೈ ನಿವಾಸದ ಬಳಿ ಬಂದು ನಿನ್ನನ್ನು ಅಪಹರಿಸುತ್ತೇನೆ ಎಂದು ಸಾರಾ ತೆಂಡೂಲ್ಕರ್ ಗೆ ಬೆದರಿಕೆ ಹಾಕಿದ್ದನಂತೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ದೇವ್ ಕುಮಾರ್ ಮೈಟಿ ಎಂಬಾತನನ್ನು ಬಂಧಿಸಿದ್ದರು.
ಈ ಹಿಂದೆ ಸಚಿನ್ ಪುತ್ರಿ ಸಾರಾ ಹಾಗೂ ಪುತ್ರ ಅರ್ಜುನ್ ಹೆಸರಲ್ಲಿ ಟ್ವಿಟರ್ ನಲ್ಲಿ ನಕಲಿ ಖಾತೆಗಳು ಕೂಡ ತೆರೆದುಕೊಂಡಿದ್ದವು. ಅಲ್ಲದೆ ಎನ್ ಸಿಪಿ ಮುಖಂಡರ ವಿರುದ್ಧ ಅವಹೇಳನಕಾರಿ ಕಮೆಂಟ್ ಗಳನ್ನು ಮಾಡಿ ಸಚಿನ್ ಕುಟುಂಬ ಮುಜಗರಕ್ಕೀಡಾಗುವಂತೆ ಮಾಡಿದ್ದರು. ಇದರ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರು ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ತಮ್ಮ ಮಕ್ಕಳ ಹೆಸರಲ್ಲಿ ಸೃಷ್ಟಿಯಾಗಿರುವ ನಕಲಿ ಟ್ವೀಟರ್ ಖಾತೆಯನ್ನು ಫಾಲೋ ಮಾಡದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಅಲ್ಲದೆ ಈ ಖಾತೆಗಳನ್ನು ಡಿಲೀಟ್ ಮಾಡುವಂತೆ ಟ್ವಿಟರ್ ಸಂಸ್ಥೆಯನ್ನು ಕೋರಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ